ಬೆಂಗಳೂರು: ಕೇಂದ್ರದ 2 ತಂಡಗಳು ಸೋಮವಾರದಿಂದ ಇದೇ 26ರ ವರೆಗೆ ರಾಜ್ಯದಲ್ಲಿನ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲಿವೆ.
ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆರ್.ಕೆ. ಶ್ರೀವಾಸ್ತವ್ ನೇತೃತ್ವದ 1ನೇ ತಂಡ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಪ್ರಾದೇಶಿಕ ಅಧಿಕಾರಿ ಸಂಜಯ್ ಗರ್ಗ್, ಯೋಜನಾ ಆಯೋಗದ ಹಿರಿಯ ಸಂಶೋಧನಾ ಅಧಿಕಾರಿ ಮುರುಳೀ ಧರನ್, ಚೆನ್ನೈನ ತಂಬಾಕು ಅಭಿವೃದ್ಧಿ ಸಂಸ್ಥೆಯ ಪ್ರಭಾರ ನಿರ್ದೇಶಕ ಕೆ. ಮನೋಹರನ್ ಈ ತಂಡದಲ್ಲಿದ್ದಾರೆ.
ಈ ತಂಡ 23ರಂದು ಮಧ್ಯಾಹ್ನ 12ಕ್ಕೆ ನವದೆಹಲಿಯಿಂದ ಮಂಗಳೂ ರಿಗೆ ಬಂದು ಅಲ್ಲಿಂದ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ. 24ರಂದು ಮಂಗಳೂರು, ಬಂಟ್ವಾಳ, ಪುತ್ತೂರು, ಸುಬ್ರಹ್ಮಣ್ಯ, ಸುಳ್ಯ, ಸಂಪಾಜಿ ಹಾಗೂ 25ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದೆ.
2ನೇ ತಂಡದಲ್ಲಿ ಕೇಂದ್ರೀಯ ಜಲ ಆಯೋಗದ ಕೆ.ಎಸ್. ಜಾಕೋಬ್, ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ನಿರ್ದೇಶಕ ವಿವೇಕ್ ಗೋಯಲ್, ಹಣಕಾಸು ಇಲಾಖೆಯ ಡಾ.ಪಿ.ಜಿ. ಎಸ್.ರಾವ್ ಇದ್ದಾರೆ.
ಈ ತಂಡ ಸೆ.23ರಂದು ಬೆಳಗಾವಿ ಜಿಲ್ಲೆಯ ಖಾನಾಪುರ, ಸಿದ್ನಾಳ, ಕರಡಗಾ, ಸದಲಗಾ, ಕಲ್ಲೋಳ, ಅಂಕಲಿ ಹಾಗೂ 24ರಂದು ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ, ಅಂಕೋಲಾ, ಹುಲೇಮಳಗಿ, ಸಿದ್ದಾಪುರ, 25ರಂದು ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮತ್ತು ಬೀರೂರುಗಳಲ್ಲಿ ಸಮೀಕ್ಷೆ ಕೈಗೊಳ್ಳಲಿದೆ.