ಬೆಂಗಳೂರು: ಪೀಣ್ಯ ಕೈಗಾರಿಕಾ ಸಂಘದ ಆಶ್ರಯದಲ್ಲಿ ಎರಡು ದಿನಗಳ `ಪಿಐಎ-ಎಕ್ಸ್ಪೋ-2012~ ಬೃಹತ್ ಕೈಗಾರಿಕಾ ಮೇಳ ಫೆ. 17 ಮತ್ತು 18ರಂದು ಪೀಣ್ಯ 4ನೇ ಹಂತದ ಕೈಗಾರಿಕಾ ಪ್ರವೇಶದ ಎಂ.ಎಸ್. ರಾಮಯ್ಯ ಉನ್ನತ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ.
ಈ ಮೇಳದಲ್ಲಿ 200ಕ್ಕೂ ಅಧಿಕ ಕೈಗಾರಿಕೆಗಳು ಹಾಗೂ ಆಟೋಮೊಬೈಲ್ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಎಸ್. ಬಾಲಸುಬ್ರಮಣ್ಯಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಮೇಳದಲ್ಲಿ ಸುಮಾರು ಆರು ಸಾವಿರ ಮಂದಿ ಕೈಗಾರಿಕೋದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವುದರ ಜತೆಗೆ, ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಫೆ. 17ರಂದು ಬೆಳಿಗ್ಗೆ 9 ಗಂಟೆಗೆ ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ ಮೇಳಕ್ಕೆ ಚಾಲನೆ ನೀಡಲಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತಿತರರು ಭಾಗವಹಿಸಲಿದ್ದಾರೆ. ಆನಂತರ ಮೇಳದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸಂಬಂಧಿಸಿದ ಗೋಷ್ಠಿಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಪೀಣ್ಯ ಕೈಗಾರಿಕಾ ಸಂಘದಲ್ಲಿ ಸುಮಾರು 4,500 ಮಂದಿ ಸದಸ್ಯರಿದ್ದು, ಅಂಗವಿಕಲ ಕಾರ್ಮಿಕ ಮಹಿಳೆಯರ ಅನುಕೂಲಕ್ಕಾಗಿ ವಸತಿನಿಲಯ ಸ್ಥಾಪಿಸಲಾಗಿದೆ. ಅಲ್ಲದೆ, ಮಕ್ಕಳ ಆರೈಕೆಗಾಗಿ ಪಾಲನಾ ಕೇಂದ್ರ ತೆರೆಯಲಾಗಿದೆ ಎಂದರು. ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ನರಸಿಂಹನ್, ಪ್ರಮೋದ್ ಸೇಥಿ, ಅರುಣ್ ಸೇಥಿ, ಪ್ರಕಾಶ್, ಜೆ. ಕ್ರಾಸ್ಟಾ ಮತ್ತಿತರರು ಉಪಸ್ಥಿತರಿದ್ದರು.