ಹಾವೇರಿ: ರಾಜ್ಯ ಹಾಗೂ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ, ಸ್ಥಳಿಯ ಲಯ ನ್ಸ್ ಕ್ಲಬ್ನ ಆಶ್ರಯದಲ್ಲಿ ಸೆ.8 ರಿಂದ 11ರ ವರೆಗೆ ನಡೆಯಲಿರುವ ರಾಜ್ಯ ಮಟ್ಟದ 10ನೇ ಬ್ಯಾಡ್ಮಿಂಟನ್ ಟೂರ್ನಿಗೆ ಹಾವೇರಿ ನಗರ ಸಜ್ಜುಗೊಂಡಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ನೂತನವಾಗಿ ನಿರ್ಮಿಸಲಾದ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಬ್ಯಾಡ್ಮಿಂಟನ್ ಹಾಲ್ನಲ್ಲಿ ನಡೆಯುತ್ತಿರುವ ಟೂರ್ನಿಗೆ ನಾಲ್ಕು ಕೋರ್ಟ್ಗಳು ಸಿದ್ಧಪಡಿಸಲಾಗಿದೆ. ಗುರುವಾರದಿಂದ ನಾಲ್ಕು ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 19 ವರ್ಷದೊಳಗಿನ ಸಿಂಗಲ್ಸ್, ಡಬಲ್ಸ್, ಮುಕ್ತ ಸಿಂಗಲ್ಸ್, ಡಬಲ್ಸ್, ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ರ್ಯಾಂಕಿಂಗ್ ಹೊಂದಿರುವ ಕ್ರೀಡಾಪಟುಗಳು ಸೇರಿದಂತೆ 173 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಪುರುಷರ ವಿಭಾಗದಲ್ಲಿ ರಾಷ್ಟ್ರ ಮಟ್ಟದ 12ನೇ ರ್ಯಾಂಕಿಂಗ್ ಹೊಂದಿದ ರೋಹನ್ ಕ್ಯಾಸಲಿನ್, 24ನೇ ರ್ಯಾಂಕಿಂಗ್ ಒಳಗಿರುವ ಆದಿತ್ಯಾ ಪ್ರಕಾಶ್, ಮಹಿಳೆಯರ ವಿಭಾಗದಲ್ಲಿ ಜಿ.ಎಂ.ನಿಶ್ಚಿತಾ, ಡಬಲ್ಸ್ನಲ್ಲಿ ರ್ಯಾಂಕಿಗ್ ಹೊಂದಿರುವ ಗುರುಪ್ರಸಾದ್, ವಿನಸ್ ಮ್ಯಾನಿಯಲ್, ಮಿಶ್ರ ಡಬಲ್ಸ್ನಲ್ಲಿ ಗುರುಪ್ರಸಾದ್, ನಿಶ್ಚಿತಾ ಅಲ್ಲದೇ ಧಾರವಾಡದ ಅಜೇಯ ಪಾಟೀಲ, ಬೆಂಗಳೂರಿನ ಶಿವಕುಮಾರ, ಅಮಿತ್, ಕೊಪ್ಪದ ರಿಯಾಜ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಬೆಂಗಳೂರಿನ ಆರ್.ಸುರೇಶಕುಮಾರ ಸೇರಿದಂತೆ ಐವರು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಟೂರ್ನಿಯ ಪ್ರಾಯೋಜಕತ್ವವನ್ನು ಯುನೆಕ್ಸ್ ಸನ್ರೈಸ್ ಕಂಪೆನಿ ವಹಿಸಿದೆ ಎಂದು ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶಿವರಾಜ ಮುರ್ತೂರ ಹೇಳಿದ್ದಾರೆ.
ಕೆಸರಿನ ಸ್ವಾಗತ: ಪ್ರಥಮ ಬಾರಿಗೆ ನಗರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕ್ರೀಡಾಪಟುಗಳಿಗೆ ಕೆಸರಿನ ಸ್ವಾಗತ ದೊರೆತಿದೆ.
ಮಳೆಯಿಂದ ನಗರದ ರಸ್ತೆಗಳು ಸಂಪೂರ್ಣ ಕೆಸರಿನ ಗದ್ದೆಗಳಾಂತಾಗಿದ್ದು, ಕ್ರೀಡಾಪಟುಗಳು ಕ್ರೀಡಾಂಗಣಕ್ಕೆ ತೆರಳಲು ಸರಿಯಾದ ದಾರಿ ಇಲ್ಲದೇ ಪರಿತಪಿಸುವ ದೃಶ್ಯ ಕಂಡು ಬಂದಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.