ನವದೆಹಲಿ (ಪಿಟಿಐ): 2ಜಿ ತರಂಗಾಂತರ ಪರವಾನಗಿ ಹಂಚಿಕೆ ಹಗರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸುವ ನಿರ್ಧಾರವನ್ನು ಮಂಗಳವಾರ ಪ್ರಕಟಿಸಲಾಗುವುದು ಎಂದು ಸರ್ಕಾರ ತಿಳಿಸಿರುವುದರಿಂದ ಸಂಸತ್ತಿನ ಬಜೆಟ್ ಅಧಿವೇಶನ ಸುಗಮವಾಗಿ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಲೋಕಸಭಾ ಅಧ್ಯಕ್ಷೆ ಮೀರಾ ಕುಮಾರ್ ಕರೆದಿದ್ದ ವಿರೋಧ ಪಕ್ಷಗಳ ಮುಖಂಡರ ಸಭೆಯಲ್ಲಿ ಲೋಕಸಭೆಯ ಆಡಳಿತ ಪಕ್ಷದ ಮುಖಂಡ ಮತ್ತು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು, ಬಜೆಟ್ ಅಧಿವೇಶನ ಆರಂಭವಾದ ನಂತರ ಮಂಗಳವಾರ ಜೆಪಿಸಿ ರಚನೆಯ ಕುರಿತಂತೆ ಅಧಿಕೃತ ಪ್ರಕಟಣೆ ನೀಡಲಾಗುವುದು ಎಂದರು.
ರಾಷ್ಟ್ರಪತಿ ಅವರು ಸೋಮವಾರ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಬಜೆಟ್ ಅಧಿವೇಶನಕ್ಕೆ ಚಾಲನೆ ದೊರೆಯುತ್ತದೆ. 25ರಂದು ಬಜೆಟ್ ಪೂರ್ವ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಅದೇ ದಿನ ರೈಲ್ವೆ ಬಜೆಟ್ ಸಹ ಮಂಡನೆಯಾಗುತ್ತದೆ. ನಂತರ 28ರಂದು ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ.