ಬೆಂಗಳೂರು: `ಪ್ರಜಾವಾಣಿ~ ಮತ್ತು `ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಸಮೂಹ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಐಐಟಿ ಪ್ರವೇಶ ಆಸಕ್ತ ವಿದ್ಯಾರ್ಥಿಗಳಿಗೆ ಬದಲಾದ ಪರೀಕ್ಷಾ ವಿಧಾನದ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ಶಿಬಿರ ನಗರದ ಕೆ.ಜಿ. ರಸ್ತೆಯ ಶಿಕ್ಷಕರ ಸದನದಲ್ಲಿ ಜುಲೈ 22ರಂದು ಬೆಳಿಗ್ಗೆ 10ರಿಂದ ಆರಂಭವಾಗಲಿದೆ.
ದೇಶದ 15 ಶ್ರೇಷ್ಠ ಕಾಲೇಜುಗಳಲ್ಲಿ 7,000 ಸೀಟುಗಳಿಗಾಗಿ ಪ್ರತಿ ವರ್ಷ ಐದು ಲಕ್ಷಕ್ಕೂ ಅಧಿಕ ಮಂದಿ ಸ್ಪರ್ಧಿಸುತ್ತಿದ್ದಾರೆ. ಈ ವರೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಿಂದ ಜಂಟಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿತ್ತು. ಮೊತ್ತಮೊದಲ ಬಾರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲು ಸರ್ಕಾರ ನಿರ್ಧರಿಸಿದೆ.
ಬದಲಾದ ಪರೀಕ್ಷಾ ವಿಧಾನ ಈ ವರ್ಷದಿಂದಲೇ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು. ಶಿಕ್ಷಣ ತಜ್ಞ ಆನಂದ್ ಕುಮಾರ್, ಡಾ. ಆಲಿ ಖ್ವಾಜಾ ಮಾರ್ಗದರ್ಶನ ನೀಡುವರು.
ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ವರೆಗೆ ವಿದ್ಯಾರ್ಥಿಗಳಿಗೆ, ಮಧ್ಯಾಹ್ನ 2ರಿಂದ 4ವರೆಗೆ ಶಿಕ್ಷಕರಿಗೆ ಹಾಗೂ ಪೋಷಕರಿಗೆ ವಿಶೇಷ ಮಾರ್ಗದರ್ಶನ ಏರ್ಪಡಿಸಲಾಗಿದೆ. ಸಂಪರ್ಕಕ್ಕೆ: ಜೋಯಿಸ್-9845553848, ಶ್ರೀಧರ್-9845950951 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.