ಗಿರಿನಗರದ ಪೂರ್ಣಪ್ರಮತಿ ಸಮಗ್ರ ಕಲಿಕಾ ಶಾಲೆಯು ಡಿ.25 ಮತ್ತು 26ರಂದು ‘ಪೂರ್ಣಪ್ರಮತಿ ಜಾತ್ರೆ’ಯನ್ನು ಆಯೋಜಿಸಿದೆ. ‘ಜೀವಸಂಕುಲದಲ್ಲಿ ಪರಸ್ಪರ ಅವಲಂಬನೆ’ (ಜೀವೋ ಜೀವಸ್ಯ ಜೀವನಂ) ಎಂಬುದನ್ನು ಈ ವರ್ಷದ ಧ್ಯೇಯವಾಕ್ಯವಾಗಿಸಿಕೊಂಡಿರುವ ಶಾಲೆಯು, ಜಾತ್ರೆಯ ಕಾರ್ಯಕ್ರಮಗಳಲ್ಲೂ ಇದನ್ನೇ ಗಮನದಲ್ಲಿ ಇರಿಸಿಕೊಂಡಿದೆ.
ಇದರ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯ ‘ಜ್ಞಾನಭಾರತಿ’ ಆವರಣದಲ್ಲಿನ ಎನ್ಎಸ್ಎಸ್ ಭವನದಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಅಂತರಶಾಲಾ ಚಟುವಟಿಕೆಗಳು, ನಾಟಕ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಚಿತ್ರ ರಚನೆ ಇತ್ಯಾದಿ ನಡೆಯಲಿವೆ. ಶೈಕ್ಷಣಿಕ ಮಳಿಗೆಗಳೂ ಇರಲಿವೆ. ನಗರದ ವಿವಿಧ ಶಾಲೆಗಳು ಮಾತ್ರವಲ್ಲದೆ ಪಶ್ಚಿಮಘಟ್ಟ ಪ್ರದೇಶ, ಧಾರವಾಡ, ಚಿಕ್ಕಬಳ್ಳಾಪುರ, ಪುಣೆ ಮತ್ತು ರಾಜಸ್ತಾನದ ಆಯ್ದ ಶಾಲೆಗಳು ಕೂಡ ಭಾಗವಹಿಸಲಿವೆ.
ಮೊದಲ ದಿನವಾದ 25ರ ಕಾರ್ಯಕ್ರಮಗಳು ಅಮೃತ ಮಹಲ್ ಕಾವಲ್, ಪಶ್ಚಿಮಘಟ್ಟ, ಜೈವಿಕ ಪ್ರತಿಕ್ರಿಯೆಗಳು, ಪ್ರಾಚೀನ ಗ್ರಂಥಗಳಲ್ಲಿ ಪ್ರಕೃತಿ, ವನ್ಯಜೀವಿ ಪರಿಸರ, ಬುಡಕಟ್ಟು ಜನಾಂಗಗಳು ಹಾಗೂ ಪರಿಸರವನ್ನು ಆಧರಿಸಿರುತ್ತವೆ.
ಪರಿಸರ ತಜ್ಞರಾದ ಯಲ್ಲಪ್ಪ ರೆಡ್ಡಿ ಮತ್ತು ನಾಗೇಶ ಹೆಗಡೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಅತಿಥಿಗಳು: ಅನಂತ ಹೆಗಡೆ ಆಶೀಸರ (ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ), ಡಾ. ಆರ್.ನಾಗೇಂದ್ರನ್ (ರಾಷ್ಟ್ರೀಯ ಹಸಿರು ಪ್ರಾಧಿಕಾರದ ತಜ್ಞ ಸದಸ್ಯ), ಲಿಯೋ ಎಚ್.ಸಲ್ಡಾನ (ಎನ್ವೈರ್ನ್ಮೆಂಟ್ ಸಪೋರ್ಟ್ ಗ್ರೂಪ್ನ ಸಂಚಾಲಕ), ಕರಿಯಣ್ಣ (ದೊಡ್ಡ ಉಳವತ್ತಿ ಅಮೃತ ಮಹಲ್ ಕಾವಲ್ ಹೋರಾಟ ಸಮಿತಿ ಅಧ್ಯಕ್ಷ), ಡಾ. ಹರೀಶ್ ಭಟ್ (ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ), ಪ್ರೊ. ಕೆ.ಎಸ್.ಕಣ್ಣನ್ (ಸಂಸ್ಕೃತ ವಿದ್ವಾಂಸ), ಡಾ. ಎಂ.ಬಿ.ಕೃಷ್ಣ (ಪಕ್ಷಿ ವಿಜ್ಞಾನಿ), ಗೌರಿ ದತ್ತು (‘ಅಭಿನಯ ತರಂಗ’ದ ಪ್ರಾಂಶುಪಾಲರು).