ಬೆಂಗಳೂರು: ಜಲಮಂಡಳಿಯು ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿ ಪ್ರದೇಶಗಳಲ್ಲಿ ಶುಕ್ರವಾರ ಕೈಗೊಂಡಿದ್ದ ತುರ್ತು ನಿರ್ವಹಣಾ ಕಾರ್ಯ ಪೂರ್ಣಗೊಂಡಿದೆ.
ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಬನಶಂಕರಿ, ಕುಮಾರಸ್ವಾಮಿ ಲೇಔಟ್, ಗಿರಿನಗರ, ಪದ್ಮನಾಭನಗರ, ಜಯನಗರ 6, 7 ಮತ್ತು 8ನೇ ಬ್ಲಾಕ್, ಜೆ.ಪಿ.ನಗರ, ವಿ.ವಿ.ಪುರ, ಮಾಗಡಿ ರಸ್ತೆ, ಮೈಸೂರು ರಸ್ತೆ, ಬಸವನಗುಡಿ, ಗಾಂಧಿ ಬಜಾರ್, ಬನಪ್ಪ ಪಾರ್ಕ್ ಮುಂತಾದ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ನಿರ್ವಹಣಾ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ನೀರು ಪೂರೈಕೆಯಾಗಲಿದೆ.
ಎಂ.ಪಿ. ಪ್ರಕಾಶ್ ಪುಣ್ಯತಿಥಿ
ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ, ದಿವಂಗತ ಎಂ.ಪಿ. ಪ್ರಕಾಶ್ ಅವರ ಪುಣ್ಯತಿಥಿಯನ್ನು ನಗರದಲ್ಲಿ ಗುರುವಾರ ಆಚರಿಸಲಾಯಿತು.
ಇಲ್ಲಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ `ಕರುಣಾಶ್ರಯ~ ಸಂಸ್ಥೆಯಲ್ಲಿ `ಅಖಿಲ ಕರ್ನಾಟಕ ಎಂ.ಪಿ. ಪ್ರಕಾಶ್ ಜನಹಿತ ವೇದಿಕೆ~ ಆಯೋಜಿಸಿದ್ದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಎಂ.ವಿ. ರಾಜಶೇಖರನ್, ಆರ್.ವಿ. ದೇಶಪಾಂಡೆ, ಬಿಬಿಎಂಪಿ ಸದಸ್ಯ ಆಂಜನೇಯ ರೆಡ್ಡಿ ಭಾಗವಹಿಸಿದ್ದರು.