ಬೆಂಗಳೂರು: `ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ವತಿಯಿಂದ `ರಾಷ್ಟ್ರೀಯ ಏರೋಲಿಂಪಿಕ್ಸ್ -2012' ಕಾರ್ಯಕ್ರಮವನ್ನು ಹೊಸ ತಿಪ್ಪಸಂದ್ರದ ಎಡಿಇ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 9.30 ಕ್ಕೆ ಏರ್ಪಡಿಸಲಾಗಿದೆ' ಎಂದು ವೈಮಾನಿಕ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಪಿ.ಎಸ್. ಕೃಷ್ಣನ್ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ವಿಮಾನಗಳ ತಂತ್ರಜ್ಞಾನಗಳ' ಕುರಿತು ಚರ್ಚೆ ಮತ್ತು ಅನೇಕ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಯಲಿದೆ' ಎಂದರು.
`ವಿದ್ಯಾರ್ಥಿಗಳು `ವಿಮಾನದಲ್ಲಿನ ಆಧುನಿಕ ತಂತ್ರಜ್ಞಾನಗಳು' ಕುರಿತು ಸಲ್ಲಿಸಿದ 40 ಪುಟಗಳ ವರದಿಯನ್ನು ಆಧರಿಸಿ ಅವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗಿದೆ. ಸ್ಪರ್ಧೆಗೆ ದೇಶದ ಒಟ್ಟು ಇಪ್ಪತ್ತು ಶಾಲೆಗಳು ಆಯ್ಕೆಯಾಗಿದ್ದು, ಪ್ರತಿಯೊಂದು ಗುಂಪಿನಲ್ಲಿ ನಾಲ್ಕು ವಿದ್ಯಾರ್ಥಿಗಳು ಇರುತ್ತಾರೆ' ಎಂದು ಹೇಳಿದರು.
`ವಿದ್ಯಾರ್ಥಿಗಳಿಗೆ ಮೂರು ದಿನಗಳು ಸ್ಪರ್ಧೆ ನಡೆಯಲಿದ್ದು, ಅವರು ತಾವೇ ತಯಾರಿಸಿದ ಯೋಜನಾ ವರದಿಯ ಬಗ್ಗೆ ಪ್ರಶ್ನೆಗಳು, ಅವರ ಸಾಮಾನ್ಯ ತಿಳವಳಿಕೆಯ ಬಗ್ಗೆ ರಸಪ್ರಶ್ನೆ, ಕೋಲಾಜ್ಗಳನ್ನು ನಿರ್ಮಿಸುವಂತಹ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ' ಎಂದರು.
`ವಿದ್ಯಾರ್ಥಿಗಳಿಗೆ ಏರೋನಾಟಿಕಲ್ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅರಿವು, ಆಸಕ್ತಿ ಮೂಡಿಸಿ ಅವರಿಗೆ ಪ್ರೋತ್ಸಾಹವನ್ನು ನೀಡುವುದು. ಇಂದಿನ ವಿದ್ಯಾರ್ಥಿಗಳಲ್ಲಿ ಏರೋನಾಟಿಕಲ್ ಎಂಜಿನಿಯರ್ ಮತ್ತು ವಿಜ್ಞಾನಿಗಳಾಗಲು ಆಸಕ್ತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ' ಎಂದು ಹೇಳಿದರು.