ಚನ್ನಪಟ್ಟಣ: ರೇಷ್ಮೆ ಬೆಳೆಗಾರರ ಸಂಕಷ್ಟಗಳ ನಿವಾರಣೆಗೆ ಒತ್ತಾಯಿಸಿ ರಾಜ್ಯ ರೈತ ಸಂಘವು ಜು.17ರಂದು ವಿಧಾನಸ್ಧೌ ಮುತ್ತಿಗೆ ಕರ್ಯಕ್ರಮ ಹಮ್ಮಿಕೊಂಡಿದೆ ಎಂದು ರಾಜ್ಯ ರೈತ ಸಂಘದ ಸಂಚಾಲಕ ಸಿ. ಪುಟ್ಟಸ್ವಾಮಿ ತಿಳಿಸಿದ್ದಾರೆ.
ಚೀನಾ ರೇಷ್ಮೆ ಆಮದನ್ನು ಕೈಬಿಡಬೇಕು, ರೇಷ್ಮೆ ಆಮದು ಸುಂಕವನ್ನು ಶೇ.35ಪ್ರಮಾಣಕ್ಕೆ ಈ ಹಿಂದೆ ಇದ್ದಂತೆ ಏರಿಸಬೇಕು. ದೇಶದ ಗಡಿಯ ಕಳ್ಳಮಾರ್ಗದಲ್ಲಿ ರೇಷ್ಮೇ ನುಸುಳುತ್ತಿರುವುದನ್ನು ಪರಿಣಾಮಕಾರಿಯಾಗಿ ತಡೆಯಬೇಕು ಎಂದು ಆಗ್ರಹಿಸಲಾಗುವುದು.
ಇದರ ಜೊತೆಗೆ ರೇಷ್ಮೆ ವಿಚಕ್ಷಣಾ ದಳ ಜಾರಿಗೆ ತರಬೇಕು, ಗೂಡಿನ ಬೆಲೆ ನಿಗದಿಗೆ ವೈಜ್ಞಾನಿಕ ಮಾನದಂಡ ಅನುಸರಿಸಬೇಕು ಹಾಗೂ ಹರಾಜು ಪದ್ದತಿಯನ್ನು ನಿಲ್ಲಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಸಲಾಗುವುದು ಎಂದು ತಿಳಿಸಿದ್ದಾರೆ.
ಜೂನ್ 17ರಂದು ಬೆಳಿಗ್ಗೆ 7ಗಂಟೆಗೆ ಚನ್ನಪಟ್ಟಣ ರೈಲು ನಿಲ್ದಾಣದಿಂದ ಬೆಂಗಳೂರಿಗೆ ಹೊರಡಲಿದ್ದು, ರೇಷ್ಮೆ ಬೆಳೆಗಾರರು, ರೀಲರ್ಗಳು, ಫಿಲೇಚರ್ ಕಾರ್ಮಿಕರು, ಹುರಿ ಮಾಡುವವರು, ನೇಕಾರರು, ಮಾರುಕಟ್ಟೆ ಚಾಕಿ ಸಾಕಾಣಿಕಾ ಕೇಂದ್ರಗಳು, ಗ್ರೈನೇಜ್ಗಳ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹೋರಾಟದ ಯಶಸ್ಸಿಗೆ ಸಹಕರಿಸಬೇಕು ಎಂದು ರೈತ ಸಂಘದ ಸಿ. ಪುಟ್ಟಸ್ವಾಮಿ, ಕೆ. ಮ್ಲ್ಲಲಯ್ಯ, ಎಂ. ರಾಮು, ಕೆ.ಎಸ್. ಲಕ್ಷ್ಮಣಸ್ವಾಮಿ, ಪುರದಯ್ಯ, ಸಂಪತ್ಕುಮಾರ್ ಮನವಿ ಮಾಡಿದ್ದಾರೆ.