ಹಿರಿಯೂರು: ತಾಲ್ಲೂಕಿನ ವಾಣಿವಿಲಾಸಪುರ ರಸ್ತೆಯಲ್ಲಿ ಬರುವ ಹುಚ್ಚವ್ವನಹಳ್ಳಿ ಸಮೀಪದ ರಸ್ತೆ ಕಾಮಗಾರಿಯನ್ನು ಎರಡು ವರ್ಷ ಕಳೆದರೂ ಮುಗಿಸದೆ ಇರುವ ಕಾರಣ ಫೆ. 19ರಂದು ಸೇತುವೆ ಬಳಿ ರಸ್ತೆತಡೆ ಹಮ್ಮಿಕೊಳ್ಳಲಾಗಿದೆ.ಉಪ್ಪಾರಹಟ್ಟಿ ಹಾಗೂ ಹುಚ್ಚವ್ವನಹಳ್ಳಿಯ ಶಾಲಾ ಮಕ್ಕಳು, ಗ್ರಾಮಸ್ಥರು ಇದೇ ಸೇತುವೆ ಮೇಲೆ ಸಂಚರಿಸಬೇಕು. ಗಣಿ ಲಾರಿಗಳ ಭಾರಕ್ಕೆ ಹಳೆಯ ಸೇತುವೆಯೂ ಹಾಳಾಗಿದೆ. ಹೊಸ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಎರಡೂ ಹಳ್ಳಿಗಳ ಜನ ರಸ್ತೆತಡೆಗೆ ಮುಂದಾಗಿದ್ದೇವೆ ಎಂದು ಬಸವರಾಜು, ಕರಿಯಪ್ಪ, ಬಸಣ್ಣ, ತಿಪ್ಪೇಸ್ವಾಮಿ, ಬಿ. ನಾಗರಾಜು, ಮಹಮದ್ ವಲಿ, ಓ. ತಿಪ್ಪೇಸ್ವಾಮಿ, ಸುಧಾಕರ ಮತ್ತಿತರರು ತಿಳಿಸಿದ್ದಾರೆ.
ಕಾರ್ಯಕರ್ತರ ಸಭೆ
ಹೊಳಲ್ಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಫೆ. 19ರಂದು ಮಧ್ಯಾಹ್ನ 2ಕ್ಕೆ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಕಾರ್ಯಕರ್ತರ ಸಭೆ ನಡೆಯಲಿದೆ.ಫೆಡರೇಷನ್ ಅಧ್ಯಕ್ಷ ಜೆ.ಬಿ. ರೇವಣಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅಡುಗೆ ತಯಾರಕರಿಗೆ ಸೇವಾಭದ್ರತೆ, ಆರೋಗ್ಯ ಸೌಲಭ್ಯಗಳು, ಪಿಂಚಣಿ, ಕನಿಷ್ಠ ವೇತನಕ್ಕೆ ಒತ್ತಾಯಿಸುವ ಕುರಿತು ಚರ್ಚಿಸಲಾಗುವುದು. ಆದ್ದರಿಂದ ತಾಲ್ಲೂಕಿನ ಎಲ್ಲಾ ಬಿಸಿಯೂಟ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುವಂತೆ ಪ್ರಧಾನ ಕಾರ್ಯದರ್ಶಿ ಎಸ್. ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.