ದಾವಣಗೆರೆ: ‘ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಡಿ.23ರಂದು ಸ್ವಯಂ ಪ್ರೇರಿತ ದಾವಣಗೆರೆ ಬಂದ್ಗೆ ಕರೆ ನೀಡಲಾಗಿದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಬೆಳಿಗ್ಗೆ 7ರಿಂದ 5ರ ವರೆಗೆ ಬಂದ್ ನಡೆಯಲಿದೆ. ರೈತರು, ವಿವಿಧ ಸಂಘಟನೆಯ ಮುಖಂಡರು, ವರ್ತಕರು, ವ್ಯಾಪಾರಿಗಳು, ಕಾರ್ಮಿಕರು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾಹಿತಿ ನೀಡಿದರು.
‘ಕಾಂಗ್ರೆಸ್ ಮುಖಂಡರೊಬ್ಬರು ಅವರ ನಾಯಕರನ್ನು ಮೆಚ್ಚಿಸಲು ಬಂದ್ ಸಂಬಂಧ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿದ ವ್ಯಕ್ತಿ ರೈತನೇ ಅಲ್ಲ. ಆತನಿಗೆ ರೈತರ ಬಗ್ಗೆ ಏನು ಗೊತ್ತು. ಬಂದ್ ವೇಳೆ ಅಹಿತಕರ ಘಟನೆ ನಡೆದರೆ ಅವರೇ ಜವಾಬ್ದಾರರು. ಹೇಳಿಕೆ ಕೊಟ್ಟವರೇ ದುಷ್ಕೃತ್ಯ ಎಸಗಿ ನಮ್ಮ ಮೇಲೆ ಹಾಕಬಹುದು. ಅದಕ್ಕಾಗಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹೇಳಿಕೆ ಕೊಟ್ಟು ದೊಡ್ಡ ಮನುಷ್ಯ ಎನಿಸಿಕೊಳ್ಳಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಮುಖಂಡರು ಅಂತಹ ವ್ಯಕ್ತಿಗಳನ್ನು ದೂರುವಿಟ್ಟು ರಾಜಕಾರಣ ಮಾಡಬೇಕು. ಇದೇ ಪ್ರವೃತ್ತಿ ಮುಂದುವರಿದರೆ ನಾವು ಸುಮ್ಮನೇ ಕೂರುವುದಿಲ್ಲ. ರೈತರ ನೆರವಿಗೆ ಬರಬೇಕಾದ ಕಾಂಗ್ರೆಸ್ ಸರ್ಕಾರ ಸುಮ್ಮನಿದೆ’ ಎಂದು ಆರೋಪಿಸಿದರು.
ಮುಖಂಡ ಬಿ.ಎಂ.ಸತೀಶ್ ಮಾತನಾಡಿ, ಅಹೋರಾತ್ರಿ ಸತ್ಯಾಗ್ರಹ ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಸೌಜನ್ಯಕ್ಕೂ ವಿಚಾರಿಸಲಿಲ್ಲ. ಸರ್ಕಾರವೇ ಕಬ್ಬಿಗೆ ನಿಗದಿ ಪಡಿಸಿದ ದರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಖಾನೆಗಳಲ್ಲಿ ಕೊಡುತ್ತಿಲ್ಲ. ಸಚಿವರ ಕಾರ್ಖಾನೆ ಯಲ್ಲಿಯೇ ಆದೇಶ ಪಾಲನೆ ಆಗುತ್ತಿಲ್ಲ ಎಂದ ಅವರು, ರೈತರಲ್ಲದ ವ್ಯಕ್ತಿಗಳು ರೈತಪರ ಹೋರಾಟದ ಬಗ್ಗೆ ಹೇಳಿಕೆ ನೀಡುವುದು ಸಲ್ಲ ಎಂದು ಹೇಳಿದರು.
ಕನ್ನಡ ಪರ ಹೋರಾಟಗಾರ ಕೆ.ಜಿ.ಯಲ್ಲಪ್ಪ ಮಾತನಾಡಿ, ಸರ್ಕಾರ ರೈತಪರ ಕಾಳಜಿ ತೋರಿಸಬೇಕು. ಒಬ್ಬ ವ್ಯಾಪಾರಿ ತನ್ನ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಹಕ್ಕಿದೆ. ಅದೇ ರೈತ ಬೆಳೆದ ಬೆಳೆಗಳಿಗೆ ಬೆಲೆ ನಿಗದಿ ಮಾಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎಸ್.ಜಗದೀಶ್, ಹೇಮಂತ್ ಕುಮಾರ್, ಬಿ.ಎಸ್.ರವಿಕುಮಾರ್, ಕಡ್ಲೆಬಾಳು ಬಸವರಾಜು, ಕೂಲಂಬಿ ಬಸವರಾಜ್, ಬಿ.ಟಿ.ಸಿದ್ದಪ್ಪ, ಅರುಣ್ಕುಮಾರ್ ಮೊದಲಾದವರು ಹಾಜರಿದ್ದರು.