ಮಹದೇವಪುರ: `ಬದುಕಿನಲ್ಲಿ ಇಚ್ಛಾ ಶಕ್ತಿ ಬಹು ಮುಖ್ಯ. ಅಂತೆಯೇ ಕರ್ತವ್ಯ ನಿಷ್ಠೆಯೂ ಅಷ್ಟೇ ಮುಖ್ಯ~ ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ದೊಡ್ಡಕನ್ನಳ್ಳಿ ಗ್ರಾಮದಲ್ಲಿ ಭಾನುವಾರ ಹೇರೋಹೊಸಹಳ್ಳಿಯ ವೇಮಾನಂದ ಆಶ್ರಮದ ವೇಮಾನಂದ ಸ್ವಾಮಿಜಿ ಸಾನ್ನಿಧ್ಯದಲ್ಲಿ ನಡೆದ ಮಹಾಯೋಗಿ ವೇಮನ ಅವರ 600ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಮಹಾಯೋಗಿ ವೇಮನ ಅವರ ವಿಚಾರಧಾರೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಮೂಲಕ ಪರಸ್ಪರ ಅರಿತು ಸಹಬಾಳ್ವೆ ನಡೆಸಲು ಮುಂದಾಗಬೇಕು~ ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರ ಕಾರ್ಯವೈಖರಿ ಬಗ್ಗೆ ಯಡಿಯೂರಪ್ಪ ಗುಣಗಾನ ಮಾಡಿದರು.
ದಾವಣಗೆರೆ ಜಿಲ್ಲೆಯ ಹೇರೋಹೊಸಹಳ್ಳಿಯ ವೇಮಾನಂದ ಆಶ್ರಮದ ವೇಮಾನಂದ ಸ್ವಾಮೀಜಿ, ವೇಮನರ ತತ್ವ- ಸಿದ್ದಾಂತಗಳ ಬಗ್ಗೆ ಬೆಳಕು ಚೆಲ್ಲಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯೆ ಶಾಂತಾರೆಡ್ಡಿ, ಪಕ್ಷದ ಮಹದೇವಪುರ ಕ್ಷೇತ್ರ ಘಟಕದ ಅಧ್ಯಕ್ಷ ಜಯಚಂದ್ರ ರೆಡ್ಡಿ ಮಾತನಾಡಿದರು. ಸಚಿವ ಆರ್. ಅಶೋಕ, ಸಂಸದ ಪಿ.ಸಿ.ಮೋಹನ್, ಶಾಸಕ ಅರವಿಂದ ಲಿಂಬಾವಳಿ, ಬಿಬಿಎಂಪಿ ಸದಸ್ಯರಾದ ಎನ್.ಆರ್.ಶ್ರೀಧರರೆಡ್ಡಿ, ಜಯಚಂದ್ರರೆಡ್ಡಿ ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ರೆಡ್ಡಿ ಜನಾಂಗದ ಪ್ರತಿಭಾವಂತರನ್ನು ಇದೇ ವೇಳೆ ಸನ್ಮಾನಿಸಲಾಯಿತು.