ಯಲಬುರ್ಗಾ: ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ ಡಿ.28ರಿಂದ ನಾಲ್ಕು ದಿನಗಳ ಕಾಲ 9ನೇ ವರ್ಷದ ಇಟಗಿ ಉತ್ಸವ ನಡೆಯಲಿದೆ.
ಉತ್ಸವದ ಪ್ರಯುಕ್ತ ನಡೆಯಲಿರುವ ರಾಜ್ಯಮಟ್ಟದ ಕವಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾದ ಸ್ಥಳೀಯ ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಅವರನ್ನು ಈಚೆಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುನಿಯಪ್ಪ ಹುಬ್ಬಳ್ಳಿ, ತಾಲ್ಲೂಕಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕವಿಗಳಿದ್ದಾರೆ. ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು, ತಮ್ಮ ಮೇಲೆ ವಿಶ್ವಾಸ ವಿಟ್ಟು ಸಾಹಿತ್ಯ ಸೇವೆಗೆ ಅವಕಾಶ ಮಾಡಿಕೊಟ್ಟಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು.
ಬೇವೂರು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಮಹಾಂತೇಶ ಮಲ್ಲನಗೌಡ, ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯ ಅಧ್ಯಕ್ಷ ಮಹೇಶಬಾಬು ಸುರ್ವೆ ಸೇರಿದಂತೆ ಅನೇಕರು ಹಾಜರಿದ್ದರು.