ಕೊಚ್ಚಿ, (ಐಎಎನ್ಎಸ್): ಕೇರಳ ಸಮುದ್ರ ತೀರದಲ್ಲಿ ಗುಂಡು ಹಾರಿಸಿ ಮೀನುಗಾರರಿಬ್ಬರನ್ನು ಹತ್ಯೆ ಮಾಡಿ, ಭಾನುವಾರ ಬಂಧನಕ್ಕೆ ಒಳಗಾಗಿದ್ದ ಇಟಲಿ ಸರಕು ಸಾಗಣೆ ಹಡಗಿನ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಸೋಮವಾರ ಇಲ್ಲಿನ ಕೊಲ್ಲಂ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಎದುರು ಅವರ ಮನೆಯಲ್ಲಿಯೇ ಸೋಮವಾರ ಸಂಜೆಯ ಒಳಗೆ ಹಾಜರು ಪಡಿಸಲಾಗುವುದು.
`ಎನ್ರಿಕಾ ಲೆಕ್ಸೀ~ ಹಡಗಿನಲ್ಲಿದ್ದ ಇಟಲಿಯ ನೌಕಾಪಡೆಗೆ ಸೇರಿದ 6 ಭದ್ರತಾ ಸಿಬ್ಬಂದಿ ಪೈಕಿ ಗುಂಡು ಹಾರಿಸಿದ ಲ್ಯಾಟೊರ್ ಮ್ಯಾಸಿಮಿಲಿಯಾನೊ ಮತ್ತು ಸಲ್ವಟೋರ್ ಗಿರೊನೆ ಅವರನ್ನು ಭಾನುವಾರ ಮಧ್ಯಾಹ್ನ ವಶಕ್ಕೆ ತೆಗೆದುಕೊಂಡು ರಾತ್ರಿ ವೇಳೆಗೆ ಬಂಧನಕ್ಕೆ ಒಳಪಡಿಸಲಾಗಿತ್ತು. ಬಂಧಿತರ ವಿರುದ್ಧ ಕೊಲೆ ಮೊಕದ್ದಮೆ ದಾಖಲಾಗಿದ್ದು, ತನಿಖೆಗೆ ವೆಲಿಂಗ್ಟನ್ ದ್ವೀಪದ ಬಳಿಯ ಸಿಐಎಸ್ಎಫ್ ಅತಿಥಿ ಗೃಹಕ್ಕೆ ಕರೆದುಕೊಂಡು ಹೋಗಲಾಗಿತ್ತು.
ಸೋಮವಾರ ಸಾರ್ವಜನಿಕ ರಜೆ ಇರುವುದರಿಂದಾಗಿ ಬಂಧಿತ ಇಟಲಿ ಹಡಗಿನ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಕೊಲ್ಲಂ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಎದುರು ಅವರ ಮನೆಯಲ್ಲಿ ಸಂಜೆ ವೇಳೆಗೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ಹೇಳಿದರು.