ಹೊನ್ನಾವರ: ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಇಡಗುಂಜಿಯಲ್ಲಿ ಗುರುವಾರ ವಿನಾಯಕ ದೇವರ ರಥೋತ್ಸವ ಭಕ್ತರ ಶ್ರದ್ಧಾ-ಭಕ್ತಿಯ ನಡುವೆ ಸಂಭ್ರಮದಿಂದ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಭಕ್ತಗರು ಸೇರಿದ್ದರು. ರಥೋತ್ಸವದ ಪುಣ್ಯಕಾಲದಲ್ಲಿ ದೇವರ ದರ್ಶನ ಪಡೆಯಲು ಭಕ್ತರು ಅಪಾರ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದರಿಂದ ನಸುಕಿನಿಂದಲೇ ಜನಜಾತ್ರೆ ಕಂಡುಬಂತು.ಎಲ್ಲೆಡೆಗೂ ಹಬ್ಬದ ವಾತಾವರಣವಿತ್ತು.
ರಾತ್ರಿ ‘ಮೃಗಯಾತ್ರಾ’ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕೆರೆಮನೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಸೇವೆ ಆಟ ಪ್ರದರ್ಶನ ನಡೆಯಿತು. ಸುಮಾರು 50 ಸಾವಿರಕ್ಕೂ ಅಧಿಕ ಜನರು ದೇವರ ದರ್ಶನ ಪಡೆದರು. ದೇವಸ್ಥಾನದ ಸುಮಾರು 25 ಕ್ವಿಂಟಾಲ್ ಪಂಚಕಜ್ಜಾಯ ಮತ್ತು 20 ಸಾವಿರ ತೆಂಗಿನಕಾಯಿಗಳನ್ನು ಪ್ರಸಾದ ರೂಪವಾಗಿ ಭಕ್ತರು ಖರೀದಿಸಿದರು.
ರಥೋತ್ಸವದ ನಿಮಿತ್ತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊನ್ನಾವರ ಬಸ್ ನಿಲ್ದಾಣದಿಂದ ಹೆಚ್ಚುವರಿಯಾಗಿ ಬಸ್ಗಳ ಸೇವೆ ಒದಗಿಸಿತ್ತು. ಟೆಂಪೊ ಸೇರಿದಂತೆ ಹಲವು ಖಾಸಗಿ ವಾಹನಗಳು ಪ್ರಯಾಣಿಕರ ಸಾಗಾಟಕ್ಕೆ ಲಭ್ಯವಿದ್ದವು. ಶುಕ್ರವಾರ ಚೂರ್ಣೋತ್ಸವ ಮತ್ತು ಅವಭೃತತೀರ್ಥ ಸ್ನಾನದೊಂದಿಗೆ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.