ಮುಂಡರಗಿ: `ಮನುಷ್ಯನಲ್ಲಿ ಅಡಗಿರುವ ದುರಾಸೆಯು ಸಮಾಜವು ವಿಧಿಸಿರುವ ನಿಯಮಗಳನ್ನು ಮುರಿಯುವಂತೆ ಅವನಿಗೆ ಪ್ರೇರೇಪಿಸುತ್ತಿದ್ದು, ತನ್ನ ಇಷ್ಟಗಳನ್ನು ಪೂರೈಸಿಕೊಳ್ಳಲು ಅವನು ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇತರರಿಗೆ ನೋವಾಗದಂತೆ ತಮ್ಮ ಇತಿಮಿತಿಯೊಳಗೆ ಬದುಕುವುದನ್ನು ಕಲಿಯಬೇಕು~ ಎಂದು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಕಾವೇರಿ ಹೇಳಿದರು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ತಾಲ್ಲೂಕು ವಕೀಲ ಸಂಘಗಳು ಸಂಯುಕ್ತವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಕಾನೂನು ಅರಿವು ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಜಗತ್ತು ಮತ್ತು ಜಗತ್ತಿನಲ್ಲಿರುವ ಎಲ್ಲ ವಸ್ತುಗಳು ಯಾರೊಬ್ಬರಿಗೂ ಸೇರಿದವುಗಳಲ್ಲ. ಅವುಗಳ ಮೇಲೆ ಎಲ್ಲರಿಗೂ ಸಮಾನವಾದ ಹಕ್ಕಿದೆ. ಆದ್ದರಿಂದ ನಾವೆಲ್ಲ ಸ್ವಾರ್ಥವನ್ನು ಬಿಟ್ಟು ಇತರರಿಗೆ ತೊಂದರೆಯಾಗದಂತೆ ಬದುಕುವುದನ್ನು ಕಲಿಯಬೇಕಾಗಿದ್ದು, ಎಲ್ಲರೂ ಉತ್ತಮವಾಗಿ ಬದುಕುವುದನ್ನು ಕಲಿತರೆ ಯಾರಿಗೂ ತೊಂದರೆಯಾಗುವುದಿಲ್ಲ~ ಎಂದು ತಿಳಿಸಿದರು.
`ಸಮಾಜದಲ್ಲಿ ಶಾಂತಿ ಸುವ್ಯೆವಸ್ಥೆ ಕಾಪಾಡಲು ರೂಪಿಸಿರುವ ಕಾನೂನಿಗೆ ನಾವೆಲ್ಲರೂ ಗೌರವ ನೀಡಬೇಕು. ಈ ದೇಶದ ಕಾನೂನು ತುಂಬಾ ಕಠಿಣವಾಗಿದ್ದು, ತಪ್ಪು ಮಾಡಿದವರು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನೆಲದ ಕಾನೂನಿಗೆ ದಕ್ಕೆಯಾಗದಂತೆ ನಾವೆಲ್ಲ ಸೌಜನ್ಯದಿಂದ ಸಹಬಾಳ್ವೆ ನಡೆಸಬೇಕು~ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ರಾಟಿ ತಿಳಿಸಿದರು.
ಸರಕಾರಿ ಅಭಿಯೋಜಕ ವಿ.ಎಸ್.ಪಾಟೀಲ ಹಾಗೂ ಮತ್ತಿತರರು ಮಾತನಾಡಿದರು. ವಕೀಲರಾದ ಜಿ.ಬಿ. ಕುಲಕರ್ಣಿ, ಎಂ.ವಿ. ಅರಳಿ, ಎನ್.ವಿ. ಹಿರೇಮಠ, ಜಿ.ಜಿ. ಈಳಗೇರ ಮೊದಲಾದವರು ಹಾಜರಿದ್ದರು.