ಇತ್ತೀಚೆಗೆ ಬಾಂಗ್ಲಾ ದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಆ ದೇಶದ ಪ್ರಧಾನಿ ಶೇಕ್ ಹಸೀನಾ ಅವರು ನಮ್ಮ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನೀಡಿದ ‘ಬಾಂಗ್ಲಾ ವಿಮೋಚನಾ ಹೋರಾಟ ಪುರಸ್ಕಾರ’ವನ್ನು ಪಡೆದುಕೊಂಡು ಬಂದರು. ನಂತರ, ಆಗ ವಿರೋಧ ಪಕ್ಷದ ನಾಯಕರಾಗಿದ್ದ, ವಿಮೋಚನಾ ಹೋರಾಟಕ್ಕೆ ಬೆಂಬಲ ಕೊಟ್ಟ ಅಟಲ್ ಅವರ ನಿವಾಸಕ್ಕೆ ತೆರಳಿ ಆ ಪುರಸ್ಕಾರವನ್ನು ಅವರ ದತ್ತು ಪುತ್ರಿಗೆ ಹಸ್ತಾಂತರಿಸಿದ್ದು ಸರಿಯಷ್ಟೆ (ಪ್ರ.ವಾ., ಜೂನ್ 11, 2015)
ಆದರೆ ಎರಡೂ ದೇಶಗಳ ಪ್ರಧಾನಿಗಳಲ್ಲಿ ಯಾರೊಬ್ಬರೂ ನಮ್ಮ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಸ್ಮರಿಸದೆ ಜಾಣ ಮರೆವು ತೋರ್ಪಡಿಸಿರುವುದು ಆಶ್ಚರ್ಯ ತರಿಸುತ್ತದೆ. ಇಂದಿನ ಯುವಪೀಳಿಗೆಗೆ ಇದು ಯಾವ ಸಂದೇಶ ರವಾನಿಸುತ್ತದೆ? ಬಾಂಗ್ಲಾ ವಿಮೋಚನೆಗಾಗಿ ನಿರ್ಧಾರ ತೆಗೆದುಕೊಂಡವರನ್ನು ಬಿಟ್ಟು ಕೇವಲ ಬೆಂಬಲ ನೀಡಿದವರನ್ನಷ್ಟೇ ನೆನೆಯುವುದು ಯಾವ ನ್ಯಾಯ? ಆದರೆ ಇತಿಹಾಸವು ಸತ್ಯದ ಕಣ್ಣು ಮುಚ್ಚಲಾರದಷ್ಟೆ!