ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿರುದ್ಧ ರಾಜ್ಯ ಬಿಜೆಪಿ ಕರ್ನಾಟಕ ಬಂದ್ ಕರೆ ನೀಡಿದ್ದು ಹಾಗೂ ಆ ಮೂಲಕ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು ಅಕ್ಷಮ್ಯ.
‘ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಗಾದೆಯಂತೆ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವಿನ ಕಾನೂನು ಪ್ರಕ್ರಿಯೆ ವಿಷಯಕ್ಕೆ ರಾಜ್ಯದ ಜನಸಾಮಾನ್ಯರು ಒಂದು ದಿನವಿಡೀ ನರಳುವಂತೆ ಮಾಡಿದ್ದು ಅಮಾನವೀಯ.
ಬಂದ್ ಸಂದರ್ಭದಲ್ಲಿ ನಡು ರಸ್ತೆಗಳಲ್ಲಿ ಟೈರು ಸುಟ್ಟಿದ್ದು, ಮರದ ದಿಮ್ಮಿಗಳನ್ನು ರಸ್ತೆಗೆ ಹಾಕಿ ಬೆಂಕಿಯಿಟ್ಟಿದ್ದು, ರಸ್ತೆ ಮಧ್ಯಕ್ಕೆ ಕಲ್ಲು ಜೋಡಿಸಿದ್ದು, ಹೆದ್ದಾರಿ ತಡೆದು ದಿನವಿಡೀ ಸಂಚಾರವನ್ನು ತಡೆದದ್ದು, ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ್ದು, ಕಲ್ಲು ತೂರಿದ್ದು, ಬಸ್ಗೆ ಬೆಂಕಿಯಿಟ್ಟಿದ್ದು, ವಾಹನಗಳ ಟೈರ್ಗಳ ಗಾಳಿ ಬಿಟ್ಟಿದ್ದು - ಇತ್ಯಾದಿ ಕೃತ್ಯಗಳನ್ನು ಎಸಗಿದ್ದು ಅನಾಗರಿಕ.
ಬಿಜೆಪಿ ವರ್ತನೆ ತಾನೊಂದು ವಿಭಿನ್ನ ರಾಜಕೀಯ ಪಕ್ಷವೆಂಬ ನೈತಿಕ ಶಕ್ತಿ ಕಳೆದುಕೊಂಡು ದಿಕ್ಕೆಟ್ಟು ಹತಾಶವಾಗಿರುವಂತಿದೆ. ಅದರ ನಾಯಕರ ಇತ್ತೀಚಿನ ನಡೆಯನ್ನು ಗಮನಿಸಿದರೆ ಆ ಪಕ್ಷ ಬೌದ್ಧಿಕವಾಗಿ ದಿವಾಳಿಯಾಗಿರುವಂತಿದೆ. ಕಾನೂನಿನ ವಿಚಾರವನ್ನು ಕಾನೂನಿನ ಮೂಲಕ, ರಾಜಕೀಯ ವಿಚಾರವನ್ನು ರಾಜಕೀಯದ ಮೂಲಕ ಎದುರಿಸುವ ಸ್ಥೈರ್ಯ ಕಳೆದುಕೊಂಡಿದೆ.
ಈಗ ಬಂದ್ ಮಾಡಿ ಜನಸಾಮಾನ್ಯರನ್ನು ಗೋಳುಹೊಯ್ದುಕೊಳ್ಳುವ ಮಟ್ಟಕ್ಕೆ ಇಳಿದುಬಿಟ್ಟಿದೆ. ಇದೇ ಏನು ಬಿಜೆಪಿ ಬೊಬ್ಬೆ ಹೊಡೆಯುವ ಸಂಸ್ಕೃತಿ-ಸಂಸ್ಕಾರ ಹಾಗೂ ದೇಶಭಕ್ತಿ ? ಸಂಘದಿಂದ ಈ ‘ಸ್ವಯಂಸೇವಕರು? ಕಲಿತದ್ದು ಇದೇ ಏನು?