ನವದೆಹಲಿ (ಐಎಎನ್ಎಸ್): ದೆಹಲಿಯಲ್ಲಿ ನಡೆದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 10ರಂದು ಆದೇಶ ಪ್ರಕಟಿಸುವುದಾಗಿ ಇಲ್ಲಿನ ತ್ವರಿತ ಗತಿ ನ್ಯಾಯಾಲಯ ತಿಳಿಸಿದೆ.
ಆರೋಪಿಗಳ ಪರ ವಕೀಲರು ವಾದ ಪೂರ್ಣಗೊಳಿಸಿದ ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಯೋಗೇಶ್ ಖನ್ನಾ ಅವರು ಈ ಸಂಬಂಧದ ಆದೇಶವನ್ನು ಕಾಯ್ದಿರಿಸಿದ್ದಾರೆ. ಸರ್ಕಾರಿ ವಕೀಲರು ಈಗಾಗಲೇ ತಮ್ಮ ವಾದ ಮುಗಿಸಿದ್ದಾರೆ.
2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಚಲಿಸುತ್ತಿದ್ದ ಬಸ್ನಲ್ಲೇ ಬಾಲಾರೋಪಿ ಸೇರಿದಂತೆ ಆರು ಜನ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ವಿದ್ಯಾರ್ಥಿನಿಯ ಗೆಳೆಯನ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಸಿಂಗಪುರದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಆಕೆ ಬದುಕುಳಿದಿರಲಿಲ್ಲ.
ಆರು ಜನ ಆರೋಪಿಗಳ ಪೈಕಿ ಒಬ್ಬ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. 18 ವರ್ಷದೊಳಗಿನ ಆರೋಪಿಯನ್ನು ಮೂರು ವರ್ಷ ಬಾಲ ಮಂದಿರದಲ್ಲಿ ಇರಿಸಬೇಕೆಂದು ಬಾಲ ನ್ಯಾಯ ಮಂಡಳಿ ಆಗಸ್ಟ್ 31ರಂದು ಶಿಕ್ಷೆ ಪ್ರಮಾಣ ಪ್ರಕಟಿಸಿತ್ತು.