ನವದೆಹಲಿ (ಪಿಟಿಐ): ಜೈಪುರ ಸಾಹಿತ್ಯ ಉತ್ಸವದ ಕೊನೆಯ ದಿನವಾದ ಮಂಗಳವಾರ ಏರ್ಪಡಿಸಲಾಗಿದ್ದ ತಮ್ಮ ವಿಡಿಯೊ ಸಂವಾದ ರದ್ದುಗೊಳಿಸಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ವಿವಾದಿತ ಲೇಖಕ ಸಲ್ಮಾನ್ ರಶ್ದಿ, ಇದೊಂದು `ತೀರಾ ಅಸಹನೀಯ ಕ್ರಮ~ ಎಂದು ಪ್ರತಿಕ್ರಿಸಿದ್ದಾರೆ.
ತಮ್ಮ ವಿಡಿಯೊ ಸಂವಾದಕ್ಕೆ ತಡೆಯೊಡ್ಡಿದ ಘಟನೆ ನಡೆದ ನಂತರ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮುಸ್ಲಿಂ ಸಮುದಾಯದ ಕೆಲವು ಗುಂಪುಗಳಿಂದ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇಂದು ಬೆದರಿಕೆ ಎದುರಾಗಿದೆ ಎಂದು ಹೇಳಿದ್ದಾರೆ.
ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ಇರಬೇಕು. ಕೇವಲ ಬೆದರಿಕೆ ಒಡ್ಡಲು ಮಾತ್ರ ಅಲ್ಲ ಎಂದು ಖಾರವಾಗಿ ಹೇಳಿದ್ದಾರೆ. ಸಾಹಿತ್ಯ ಸಮ್ಮೇಳನ ಆರಂಭದಿಂದಲೂ ತಮ್ಮ ಭಾರತ ಪ್ರವಾಸ ಕುರಿತು ಉಂಟಾಗಿದ್ದ ವಿವಾದವನ್ನು
`ಕರಾಳ ಪ್ರಹಸನ~ ಎಂದು ಜರಿದಿದ್ದಾರೆ.
ಸಾಹಿತ್ಯ ಉತ್ಸವದಲ್ಲಿ ಮಂಗಳವಾರ ಮಧ್ಯಾಹ್ನ 3.45 ಕ್ಕೆ ರಶ್ದಿ ಅವರು ತಮ್ಮ `ಮಿಡ್ನೈಟ್ಸ್ ಚೈಲ್ಡ್~ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯ, ಇತ್ತೀಚಿನ ವರ್ಷಗಳಲ್ಲಿ ಎದುರಿಸಿದ ಸಮಸ್ಯೆ ಹಾಗೂ `ಮಿಡ್ನೈಟ್ ಚಿಲ್ಡನ್ಸ್~ ಕಾದಂಬರಿ ಚಲನಚಿತ್ರಕ್ಕೆ ಅಳವಡಿಕೆ ಬಗ್ಗೆ ಮಾತನಾಡಬೇಕಿತ್ತು.