ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ ಬಾಕ್ಸ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಕಾಮನಬಿಲ್ಲು~ ಪುರವಣಿಯಲ್ಲಿ ಪ್ರಕಟವಾದ `ಹೃದಯವಂತ ಹಣಮಂತ~ ಲೇಖನ ಆಟೊ ಓಡಿಸುವ ಹಣಮಂತನ ಶ್ರೀಮಂತ ಹೃದಯವನ್ನು ತೆರೆದಿಟ್ಟಿದೆ. ಸಮಾಜದಲ್ಲಿ ಅದೆಷ್ಟೋ ಹಣವಂತರಿಗಿಲ್ಲದ ಮಾನವೀಯತೆ, ಹೃದಯ ವೈಶಾಲ್ಯತೆ ಹಣಮಂತುವಿನ ಹೃದಯದಲ್ಲಿ ತುಂಬಿರುವುದು ಶ್ಲಾಘನೀಯ.
 

ಮನುಷ್ಯ ಬಾಲ್ಯದಲ್ಲಿ ಅನುಭವಿಸಿದ ಕಷ್ಟ, ಕಾರ್ಪಣ್ಯಗಳು ವ್ಯಕ್ತಿಯನ್ನು ಪ್ರಬುದ್ಧನನ್ನಾಗಿಸುತ್ತವೆ. ಮಹಾತ್ಮನನ್ನಾಗಿಸುತ್ತದೆ ಎನ್ನುವುದಕ್ಕೆ ಹಣಮಂತ ಸಾಕ್ಷಿ. ಆತನ ಪೂರ್ಣ ವಿಳಾಸ ಇದ್ದಿದ್ದರೆ ಒಳಿತಿತ್ತು. ಇಂತಹ ಸುಂದರ ಲೇಖನಗಳನ್ನು ಒಳಗೊಂಡು ಕಾಮನಬಿಲ್ಲು ನಿಜಕ್ಕೂ ವರ್ಣರಂಜಿತವಾಗಿ ಮೂಡಿಬರುತ್ತಿದೆ.
 -ಮೇ.ಗೊ.ಸುಬ್ಬಣ್ಣ, ಮೇಗರವಳ್ಳಿ

ಕುಷ್ಟರೋಗದ ತಾಯಿ ಅನುಭವಿಸಿದ ನರಕ ಸಮ ನೋವನ್ನು ಇನ್ಯಾರೂ ಅನುಭವಿಸಬಾರದೆಂಬ ಧಾರಾಳ ಮನಸ್ಸು ಹೊಂದಿದ ಹಣಮಂತ ದೇವನೂರರನ್ನು ಓದುಗರಿಗೆ ಪರಿಚಯಿಸಿದ `ಕಾಮನಬಿಲ್ಲು~ ಪುರವಣಿಗೆ ಧನ್ಯವಾದಗಳು. “ನಮ್ಮ ಚಿಂತೆ ನಮಗಿರಲು, ಪರರ ಚಿಂತೆ ನಮಗೆತಕಯ್ಯಾ” ಎನ್ನುವ ಕಾಲದಲ್ಲಿ ಪರರ ನೋವಲ್ಲಿ ಭಾಗಿಯಾಗುವ ಹೃದಯವಂತರು ನಮಗೆ ಬೇಕೇ ಬೇಕು ಅಲ್ವಾ?
 -ಮಲ್ಲಿಕಾ ದೇವರಕೊಳ್ಳದ, ಕೊಪ್ಪಳ

ಆನಂದತೀರ್ಥ ಪ್ಯಾಟಿಯವರ `ಹೃದಯವಂತ ಹಣಮಂತ~ ಲೇಖನ ಮನಕಲಕಿತು. ಒಬ್ಬ ಸಾಮಾನ್ಯ ಆಟೊ ಚಾಲಕ ಕುಷ್ಠ ರೋಗಿಗಳಿಗೆ ಮಾಡುವ ಜಗಮೆಚ್ಚುವ ನಿಸ್ವಾರ್ಥ ಸೇವೆ ವಿಶ್ವಕ್ಕೆ ಮತ್ತು ಯುವಶಕ್ತಿಗೆ ಮಾದರಿ. ಕೊಳ್ಳೆ ಹೊಡೆದು ಸ್ವಾರ್ಥದಲ್ಲೇ ಬದುಕುತ್ತಿರುವ ಖದೀಮರಿಗೆ ಹಣಮಂತನ ಒಳ್ಳೆತನ ಮಾದರಿಯಾಗಲಿ. ಸರ್ಕಾರ, ಸಂಘ ಸಂಸ್ಥೆಗಳು ಇವರನ್ನು ಗುರುತಿಸಲಿ.
 -ಹನುಮಂತ ಚನ್ನೂರ ಶಹಾಬಾದ, ದಾವಣಗೆರೆ

ಹೃದಯವಂತ ಹಣಮಂತ ದೇವನೂರು ಹೊಟ್ಟೆ ಪಾಡಿಗಾಗಿ ಆಟೊ ಓಡಿಸಿಕೊಂಡು ತಮ್ಮ ದುಡಿಮೆಯಲ್ಲಿ ಒಂದು ಪಾಲನ್ನು ಕುಷ್ಠ ರೋಗಿಗಳಿಗೆ,  ಬಡವರ ಕಲ್ಯಾಣ ಕಾರ್ಯಕ್ಕೆ ಮೀಸಲಿಟ್ಟಿರುವುದು ಹಾಗೂ ಔಷಧೋಪಚಾರಕ್ಕೆ ತೆಗೆದುಕೊಂಡಂತಹ ಕ್ರಮಗಳ ಬಗ್ಗೆ, ಭಾರತ ಸರ್ಕಾರ ಆ ದಂಪತಿಗೆ ನೀಡಿದ ಪ್ರಶಸ್ತಿ, ಹೀಗೆ ಅವರ ಕುರಿತು ಸಂಪೂರ್ಣ ಲೇಖನ ನೀಡಿ ಯುವಕರಿಗೆ ಮಾರ್ಗದರ್ಶನವಾಗಿ ಬಿತ್ತರಿಸಿರುವುದಕ್ಕೆ ಧನ್ಯವಾದಗಳು. ಪ್ರಜಾವಾಣಿ ಪ್ರತಿ ಗುರುವಾರ ಹೊರತರುತ್ತಿರುವ ಕಾಮನಬಿಲ್ಲು ಪುರವಣಿಯು ನಿಜಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಉತ್ತಮ ಲೇಖನಗಳು ಹಾಗೂ ಸಾಧನೆಗಳನ್ನು ಸಾರ್ಥಕತೆಯಾಗುವಂತೆ ಹೊರತರುತ್ತಿರುವುದು ನಿಜವಾದ ಅಭಿರುಚಿ.
 -ರಾಜಣ್ಣ.ಟಿ, ಬಳ್ಳಾರಿ

ಫೆ.9ರಂದು ಕಾಮನಬಿಲ್ಲು ಪ್ರಕಟಿಸಿದ ಎಸ್.ಗಂಗಾಧರಯ್ಯ ಅವರ `ಐಐಟಿ ಪ್ರತಿಭೆಗಳ ಹಳ್ಳಿ ಪ್ರೀತಿ~ ತುಂಬಾ ಚೆನ್ನಾಗಿತ್ತು. ಇಂತಹ ಲೇಖನ ಪ್ರಕಟಿಸಿದ್ದಕ್ಕೆ ಸಂಪಾದಕರಿಗೆ ಧನ್ಯವಾದಗಳು. ಪದವಿ ಸಿಕ್ಕಿದರೆ ಸಾಕು ಪಟ್ಟಣದತ್ತ ಕಾಲುಕೀಳುವ ಇಂದಿನ ಪರಿಸ್ಥಿತಿಯಲ್ಲಿ ಹಳ್ಳಿಯಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಪರಿಸರದ ಬಗ್ಗೆ ಇವರಿಗಿರುವ ಕಾಳಜಿ ನಮಗೆ ತಲೆತಗ್ಗಿಸುವಂತೆ ಮಾಡುತ್ತದೆ. ಮುಖ್ಯವಾಗಿ ನಗರಕ್ಕೆ ಅಂಟಿಕೊಳ್ಳುವ ಇಂದಿನ ಯುವಜನಕ್ಕೆ ಇವರು ಮಾದರಿ. 
 -ಅಶ್ವಿನಿ ಆನಂದ ಬರಡೋಲ, ವಿಜಾಪುರ

ಅತ್ಯುನ್ನತ ಶಿಕ್ಷಣ ಪಡೆದೂ ಮಣ್ಣಿನ ಮಕ್ಕಳ ಹಳ್ಳಿಯ ಸಂಸ್ಕೃತಿಗೆ ಮಾರು ಹೋಗಿರುವ ಐಐಟಿ ಪ್ರತಿಭೆಗಳ ಜೀವನ ಶೈಲಿಯನ್ನು ಮೆಚ್ಚಲೇಬೇಕು. ಪ್ರತಿಭಾಪಲಾಯನಗಳೇ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಇಂಥ ಅಪರೂಪದ ದೇಶಿ ಮನಸ್ಸುಗಳ ಕಾರ್ಯ ಶ್ಲಾಘನೀಯ.
 -ಅಮೃತೇಶ ತಂಡರ, ಅಣ್ಣಿಗೇರಿ.

ಸ್ವಾರ್ಥಿಗಳೇ ತುಂಬಿರೋ ಈ ಕಾಲದಲ್ಲಿ ತಾವು ದುಡಿದದ್ದರಲ್ಲಿ ಒಂದಷ್ಟು ಭಾಗವನ್ನು ಕುಷ್ಠರೋಗಿಗಳು ಮತ್ತು ಅವರ ಮಕ್ಕಳಿಗೆ ವ್ಯಯಿಸುವ ಹಣಮಂತ ಬಸಮ್ಮ ಅವರ ಕಾಳಜಿಯನ್ನು ಹೇಗೆ ಶ್ಲಾಘಿಸಿದರೂ ಸಾಲದು. ಇದನ್ನು ಜನರೆದುರು ಬಿಡಿಸಿಟ್ಟ `ಕಾಮನಬಿಲ್ಲು~ ಪುರವಣಿಗೂ ಕೃತಜ್ಞತೆಗಳು.
 ದೇವಿಕಾ, ಶ್ರೀರಂಗಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT