ಪಟ್ನಾ (ಪಿಟಿಐ): ಜನರು ಮದ್ಯ ಕುಡಿದು ಹಾಳಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬಿಹಾರ ಸರ್ಕಾರ ಮದ್ಯದ ಅಂಗಡಿ ತೆರೆಯಲು ಹೊಸ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿದೆ.
ಎಂಡಿಎ ಸರ್ಕಾರ ರಾಜ್ಯದ ಬೊಕ್ಕಸ ಹೆಚ್ಚಿಸಲು ಹೆಚ್ಚು ಹೆಚ್ಚು ಮದ್ಯದಂಗಡಿ ಪರವಾನಗಿ ನೀಡುತ್ತಿದೆ ಎಂಬ ಕೂಗು ಕೇಳುಬರುತ್ತಿರುವಾಗಲೇ ಬಿಹಾರ ಸರ್ಕಾರ ಇಂಥದ್ದೊಂದು ಕಠಿಣ ಕ್ರಮ ಕೈಗೆತ್ತಿಕೊಂಡಿದೆ.
ದೇಶದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಬಿಹಾರದಲ್ಲಿ ಮದ್ಯ ಸೇವನೆ ಮಾಡುವವರ ಹಾಗೂ ಮದ್ಯದಂಗಡಿಗಳ ಸಂಖ್ಯೆ ಕಡಿಮೆ ಇದೆ. ಪ್ರತಿ ಒಂದು ಲಕ್ಷಕ್ಕೆ ಬೇರೆ ರಾಜ್ಯಗಳಲ್ಲಿ ಇರುವ ಮದ್ಯದಂಗಡಿಗಿಂಥ ಕಡಿಮೆ ಅಂಗಡಿಗಳು ಬಿಹಾರದಲ್ಲಿವೆ ಎಂದು ಅಲ್ಲಿನ ಅಬಕಾರಿ ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ಹೇಳಿದ್ದಾರೆ.
~ಕೇವಲ ಪರವಾನಗಿ ಕಡಿಮೆ ಮಾಡುವುದು ಮಾತ್ರವಲ್ಲದೆ ಕುಡಿತದಿಂದ ಆಗಬಹುದಾದ ದುಷ್ಪರಿಣಾಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಸರ್ಕಾರ ಜನಜಾಗೃತಿ ಕಾರ್ಯಕ್ರಮ ನಡೆಸಲಿದೆ~ ಎಂದು ಅಬಕಾರಿ ಇಲಾಖೆ ಕಾರ್ಯದರ್ಶಿ ಅಮಿರ್ ಸುಭಾನಿ ತಿಳಿಸಿದರು.