ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ ಬಿಡುತ್ತಿರುವ 1750 ಕ್ಯೂಸೆಕ್ ನೀರು ದೂದಗಂಗಾ ಮತ್ತು ವೇದಗಂಗಾ ನದಿಗಳ ಮೂಲಕ ಕೃಷ್ಣಾ ನದಿ ಸೇರುತ್ತಿದೆ.
ಇದು ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಯನ್ನು ಸೇರಿ ಯಡೂರ, ಮಾಂಜರಿ ಮೂಲಕ ರಾಯಬಾಗ ತಾಲ್ಲೂಕನ್ನು ಪ್ರವೇಶಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಇದು ಅಲ್ಪ ಪ್ರಮಾಣದ ನೀರು ಆಗಿರುವುದರಿಂದ ರಾಯಬಾಗ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಮಾತ್ರ ಅನುಕೂಲವಾಗಲಿದೆ. ಅಥಣಿ ತಾಲ್ಲೂಕು, ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ನೀರಿನ ಸೌಕರ್ಯ ದೊರಕದು.
ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮೋಯಿ ನೇತೃತ್ವದಲ್ಲಿ ತೆರಳಿದ ನಿಯೋಗ ಕೊಯ್ನಾ ಜಲಾಶಯದಿಂದ ರಾಜ್ಯಕ್ಕೆ ನೀರು ಬಿಡುಗಡೆ ಮಾಡುವಂತೆ ಕಳೆದ ವಾರ ಮನವಿ ಮಾಡಿಕೊಂಡಿತ್ತು. ಇದಕ್ಕೆ ಮಹಾರಾಷ್ಟ್ರ ಸರ್ಕಾರ ಕೊಯ್ನಾ ಜಲಾಶಯದಿಂದ 1.37 ಟಿಎಂಸಿ ಅಡಿ ನೀರನ್ನು ಬಿಡಗಡೆ ಮಾಡಲು ಒಪ್ಪಿಗೆ ನೀಡಿತ್ತು. ಆದರೆ ಇದುವರೆಗೂ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.