ನವದೆಹಲಿ(ಪಿಟಿಐ): ಇನ್ಫೊಸಿಸ್ನಲ್ಲಿ ರಾಜೀನಾಮೆ ಸರಣಿ ಮುಂದುವರಿದಿದೆ. ಕಂಪೆನಿಯ ನಿರ್ದೇಶಕ ಮಂಡಳಿ ಸದಸ್ಯರಾಗಿದ್ದ ಮತ್ತು ಹೊರಗುತ್ತಿಗೆ ಸೇವೆಗಳ (ಬಿಪಿಒ) ಮುಖ್ಯಸ್ಥರಾಗಿದ್ದ ವಿ.ಬಾಲಕೃಷ್ಣನ್ ಮತ್ತು ಹಿರಿಯ ಉಪಾಧ್ಯಕ್ಷ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯ ಸುಬ್ರಮಣ್ಯಂ ಗೋಪರಾಜು ರಾಜೀನಾಮೆ ಸಲ್ಲಿಸಿದ್ದಾರೆ.
ಈ ಮೂಲಕ ಕಳೆದ ಆರು ತಿಂಗಳಲ್ಲಿ (ನಾರಾಯಣ ಮೂರ್ತಿ ಅವರು ಜೂನ್ನಲ್ಲಿ ಮತ್ತೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ) ಇನ್ಫೊಸಿಸ್ ತೊರೆದ ಉನ್ನತ ಶ್ರೇಣಿಯ ಅಧಿಕಾರಿಗಳ ಸಂಖ್ಯೆ ಎಂಟಕ್ಕೆ ಏರಿದೆ.
ಬಾಲಕಷ್ಣನ್ 1991ರಲ್ಲಿ ಇನ್ಫೊ ಸಿಸ್ ಸೇರಿದ್ದರು. ಮುಖ್ಯ ಹಣಕಾಸು ಅಧಿಕಾರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಈಗ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಎಸ್.ಡಿ.ಶಿಬುಲಾಲ್ 2015ರಲ್ಲಿ ನಿವೃ ತ್ತರಾಗಲಿದ್ದಾರೆ. ನಂತರದ ‘ಸಿಇಒ’ ಬಾಲಕೃಷ್ಣನ್ ಎಂದೇ ಬಿಂಬಿಸಲಾಗಿತ್ತು. ಅವರ ನಿರ್ಗಮನ ಅಚ್ಚರಿ ಮೂಡಿಸಿದೆ ಎಂದು ಐ.ಟಿ ವಲಯ ಪ್ರತಿಕ್ರಿಯಿಸಿದೆ.
ಗೋಪರಾಜು 1998ರಲ್ಲಿ ಇನ್ಫೊಸಿಸ್ ಸೇರಿದ್ದರು. ಅವರು ಕಂಪೆನಿಯ ಪ್ರಯೋಗಾಲಯ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ‘ಬಾಲು‘ ಮತ್ತು ‘ಸುಬು’ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಕೊನೆಯ ಕೆಲಸದ ದಿನ ಕ್ರಮವಾಗಿ ಡಿ. 31 ಮತ್ತು ಡಿ. 27 ಎಂದು ಕಂಪೆನಿ ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
ಸ್ವತಂತ್ರ ನಿರ್ದೇಶಕರು
ಈ ನಡುವೆ ಬಯೋಕಾನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಷಾ ಅವರನ್ನು ಸ್ವತಂತ್ರ ನಿರ್ದೇಶಕರಾಗಿಯೂ, ಯು.ಬಿ. ಪ್ರವೀಣ್ ರಾವ್ ಅವರನ್ನು ಪೂರ್ಣಾ ವಧಿ ನಿರ್ದೇಶಕರಾಗಿಯೂ ನೇಮಿಸಿ ಕಂಪೆನಿ ಪ್ರಕಟಣೆ ಹೊರಡಿಸಿದೆ.