ಹೆಂಗಳೆಯರ `ಎದೆಬರಹ'ವನ್ನು ಎದೆತುಂಬುವಂತೆ ವಿವರಿಸಿರುವ ರಘುನಾಥ ಚ.ಹ. ಅವರಿಗೆ ನಮ್ಮ ಧನ್ಯವಾದಗಳು. `ಎದೆಬರಹ' ಓದಿ ಹಣೆಬರಹ ಬದಲಾಯಿಸಿಕೊಳ್ಳುವ ಧೈರ್ಯ ನಮ್ಮಂಥವರಿಗಿಲ್ಲ. ಓದಲಾಗದ ಈ ಕೊರತೆಯನ್ನು ನೀಗಿಸುವಷ್ಟು ಚೆನ್ನಾಗಿ ವಿವರಗಳನ್ನು ನೀಡಿರುವ ಲೇಖನ ಸಂಗ್ರಹಯೋಗ್ಯವೂ ಹೌದು.
ಕೆ.ಆರ್. ಮುರಳಿ, ಮೈಸೂರು
ಎದೆನಡುಗಿಸುವ ಸಾಹಸವೊಂದರಲ್ಲಿ ರಘುನಾಥ ಚ.ಹ. ಅವರು ಯಶಸ್ವಿಯಾಗಿದ್ದಾರೆ. ಇಲ್ಲದಿದ್ದರೆ ಈ ಮಟ್ಟಿಗಿನ ವಿವರಗಳನ್ನು ಒಂದು ಲೇಖನದಲ್ಲಿ ಒದಗಿಸಲು ಸಾಧ್ಯವೇ ಇರುತ್ತಿರಲಿಲ್ಲ. ಆದರೆ ಅವರ ದೃಷ್ಟಿ ಕೇವಲ ಲಲನೆಯರ ಎದೆಬರಹವಷ್ಟೇ ಆಗಿರುವುದು ಸ್ವಲ್ಪ ಮಟ್ಟಿಗೆ ಬೇಸರ ತಂದಿತು. ರ್ಯಾಂಕುಗಳೆಲ್ಲಾ ಹುಡುಗಿಯರ ಪಾಲು ಎಂಬುದನ್ನು ಒಪ್ಪಿಕೊಂಡಿದ್ದೇವೆ. ಲೇಖನವೊಂದಕ್ಕೆ ಟಿ-ಶರ್ಟ್ ಬರಹವನ್ನು ಆರಿಸಿಕೊಳ್ಳುವಾಗಲೂ ಹುಡುಗಿಯರಿಗೇ ಮನ್ನಣೆ ನೀಡಿರುವುದು ಮಾತ್ರ ಹುಡುಗರಿಗೆ ಆಗಿರುವ ಅನ್ಯಾಯ.
ರಾಮಕೃಷ್ಣ ಜೆ, ಬೆಂಗಳೂರು
`ಎದೆಬರಹ'ದ ಕುರಿತಂತೆ ಸಂಶೋಧನೆಯನ್ನೇ ನಡೆಸಿರುವ ಲೇಖಕರ ಎದೆಗಾರಿಕೆ ನಿಜಕ್ಕೂ ಮೆಚ್ಚುಗೆಗೆ ಅರ್ಹ. ಹೀಗೆ ಎದೆಬರಹವನ್ನು ದಿಟ್ಟಿಸುವ ಧೈರ್ಯ ಸಣ್ಣದೇನೂ ಅಲ್ಲ. ಅನುಮಾನವಿದ್ದರೆ ಯಾರಾದರೂ ಪ್ರಯತ್ನಿಸಿ ನೋಡಬಹುದು. ಆಗ ದೊರೆಯುವ ಪ್ರತಿಕ್ರಿಯೆಯೇ ನನ್ನ ಈ ನಿಲುವಿಗೆ ಕಾರಣ ಎಂಬುದು ನಿಮಗೂ ತಿಳಿಯುತ್ತದೆ.
ಎಲ್.ಟಿ. ಮಲ್ಲಿಕಾರ್ಜುನ, ತುಮಕೂರು
ನವೆಂಬರ್ 29ರ ಸಂಚಿಕೆಯಲ್ಲಿ ಪ್ರಕಟವಾದ ವೀರಗಾಸೆ ಕಲಾವಿದರ ಕುರಿತ ಲೇಖನ ಚೆನ್ನಾಗಿತ್ತು. ಜಾನಪದ ಕಲೆಯೊಂದನ್ನು ಉಳಿಸುವುದಕ್ಕೆ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿರುವ ಈ ಯುವಕರ ಸಾಧನೆ ಮೆಚ್ಚುಗೆಗೆ ಅರ್ಹ.
ಸಿ.ಜಿ. ಸಿದ್ಧಯ್ಯ, ಬೆಂಗಳೂರು
ವೀರಗಾಸೆ ಕಲಾವಿದರ ಕುರಿತಂತೆ ಗಮನ ಸೆಳೆದಿರುವ `ಕಾಮನಬಿಲ್ಲು' ಪುರವಣಿಗೆ ಧನ್ಯವಾದಗಳು. ಈಚೆಗೆ ವೀರಗಾಸೆ ಕಲೆಗೆ ಪ್ರೋತ್ಸಾಹ ಕಡಿಮೆಯಾಗಿದೆ. ಉತ್ತರ ಕರ್ನಾಟಕದಲ್ಲಿಯೂ ಈ ಕಲೆಯಿದ್ದು ಸರ್ಕಾರ ಇದರ ಪುನರುಜ್ಜೀವನಕ್ಕೆ ಗಮನಹರಿಸಬೇಕಾಗಿದೆ. ಜಾನಪದ ಅಕಾಡೆಮಿಯಂಥ ಸಂಸ್ಥೆಗಳು ಇಂಥ ಕಲೆಗಳು ಮತ್ತೆ ಜೀವ ಪಡೆಯಲು ಸಹಕಾರ ನೀಡಬೇಕು. ಹಾಗೆಯೇ ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ಈ ಸಂಘಟನೆಗಳು ನೆರವಾಗಬೇಕು.
ಬಿ.ಎಸ್. ಮುಳ್ಳೂರ, ಹಲಗತ್ತಿ
ನಾನು ಸಾಕಷ್ಟು ಬಾರಿ ಮೈಸೂರಿಗೆ ಭೇಟಿ ನೀಡಿದ್ದೇನೆ. ರಾಮಸ್ವಾಮಿ ಸರ್ಕಲ್ ಮೂಲಕವೂ ಅದೆಷ್ಟೋ ಬಾರಿ ಹಾದು ಹೋಗಿದ್ದೇನೆ. `ಕಾಮನಬಿಲ್ಲು' ಪುರವಣಿಯನ್ನು ಓದುವ ತನಕ ಈ ವೃತ್ತಕ್ಕೆ ಇರುವ ಹೆಸರು ಒಬ್ಬ ಯುವ ಸ್ವಾತಂತ್ರ್ಯ ಹೋರಾಟಗಾರನದ್ದು ಎಂದು ತಿಳಿದಿರಲಿಲ್ಲ. ಇಂಥ ಅಪೂರ್ವ ಮಾಹಿತಿಗಳನ್ನು ನೀಡುವುದರಿಂದಲೇ `ಕಾಮನಬಿಲ್ಲು' ಪುರವಣಿ ನಮಗಿಷ್ಟು.
ಎಸ್. ಸೋಮಶೇಖರ್, ಭದ್ರಾವತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.