ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಪೈರ್ ಅವಾರ್ಡ್ ಆಯ್ಕೆ ಕಾರ್ಯಕ್ರಮ 24ರಿಂದ

Last Updated 20 ಜುಲೈ 2013, 6:36 IST
ಅಕ್ಷರ ಗಾತ್ರ

ಧಾರವಾಡ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಜ್ಞಾನದತ್ತ ಆಕರ್ಷಿಸಿ ಸಂಶೋಧನೆಗಳನ್ನು ಕೈಗೊಳ್ಳಲು ಉತ್ತೇಜಿಸುವ ಪ್ರಸಕ್ತ ಸಾಲಿನ `ಇನ್‌ಸ್ಪೈರ್ ಅವಾರ್ಡ್' ಜಿಲ್ಲಾ ಮಟ್ಟದ ಆಯ್ಕೆ ಕಾರ್ಯಕ್ರಮ ಇದೇ 24ರಿಂದ 27ರವರೆಗೆ ನಡೆಯಲಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ-ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಡಯಟ್‌ನ ಸಹಯೋಗದಲ್ಲಿ ಆಯೋಜಿಸಿರುವ ಈ ವಿಶೇಷ ಶೈಕ್ಷಣಿಕ ಅನ್ವೇಷಣೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವು ಜುಬಿಲಿ ವೃತ್ತದ ಬಳಿಯ ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.

ನಾಲ್ಕು ದಿನಗಳ ಈ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಆಯ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿ ತಮ್ಮ ತಮ್ಮ ಶಾಲೆಗಳಿಂದ ಸಿದ್ಧಗೊಳಿಸಿ ತಂದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸುವರು. ಸ್ವತಃ ಮಕ್ಕಳೇ ತಮ್ಮ ಮಾದರಿಗಳು ಹೊಂದಿರುವ ವೈಜ್ಞಾನಿಕ ಪ್ರಯೋಗಗಳ ಚಿಂತನೆಯನ್ನು ಪ್ರಸ್ತುತ ಪಡಿಸುವರು. ಇಲ್ಲಿ ಆಯ್ಕೆಯಾಗುವ ವಿಜ್ಞಾನ ಮಾದರಿಗಳು ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನು ಪಡೆಯುತ್ತವೆ.

ಜುಲೈ 24-25ರಂದು ಕಲಘಟಗಿ, ಧಾರವಾಡ ಗ್ರಾಮೀಣ, ಕುಂದಗೋಳ ಹಾಗೂ ಧಾರವಾಡ ಶಹರ ಬಿಇಓ ವಲಯಗಳ ಶಾಲಾ ಮಕ್ಕಳು, ಜುಲೈ 26-27ರಂದು ಹುಬ್ಬಳ್ಳಿ ಗ್ರಾಮೀಣ, ನವಲಗುಂದ ಮತ್ತು ಹುಬ್ಬಳ್ಳಿ ಶಹರ ಬಿಇಓ ವಲಯಗಳ ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದಾರೆ.
ಜುಲೈ 24ರಂದು ಜಿಲ್ಲಾ ಉಸ್ತುವಾರಿ ಮತ್ತು ವಾರ್ತಾ ಸಚಿವ ಸಂತೋಷ್ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು.

ಪ್ರಶಸ್ತಿ ಆಯ್ಕೆಗೆ ಪೂರಕವಾಗಿ ಈಗಾಗಲೇ ಸೂಚಿಸಿದ ಜಿಲ್ಲೆಯ ಸಂಬಂಧಿಸಿದ ಶಾಲಾ ಶಿಕ್ಷಕರು ಹಾಗೂ ಮಕ್ಕಳು ವಿಜ್ಞಾನ ಮಾದರಿಗಳೊಂದಿಗೆ ಈ ವಸ್ತು ಪ್ರದರ್ಶನದಲ್ಲಿ ಸೂಚಿತ ದಿನಗಳಂದು ಪಾಲ್ಗೊಳ್ಳಬೇಕೆಂದು ಡಯಟ್ ಪ್ರಾಚಾರ್ಯ ಎಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.

ಸಮಾಜ ವಿಜ್ಞಾನ ಕಾರ್ಯಾಗಾರ
ಹುಬ್ಬಳ್ಳಿ
: ನಗರದ ಬಾಸೆಲ್‌ಮಿಷನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಹುಬ್ಬಳ್ಳಿ ಶಹರ  ಹಾಗೂ ಹುಬ್ಬಳ್ಳಿ ತಾಲ್ಲೂಕು ಪ್ರೌಢಶಾಲೆಗಳ ಸಮಾಜ ವಿಜ್ಞಾನ ಬೋಧಕರ ಪರಿವಾರ ಸಂಘಟನೆಯ ಮೊದಲ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಲ್.ಹಂಜಾಟೆ, ಮಕ್ಕಳ ಪ್ರಗತಿಗೆ ಶ್ರಮಿಸಿ ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸಬೇಕು ಎಂದರು. ವಿಷಯ ಪರಿವೀಕ್ಷಕರಾದ ಜೆ.ಎನ್.ನಂದನ ಅವರು 2012-13ನೇ ಸಾಲಿನಲ್ಲಿ ಶೇ 100ರಷ್ಟು ಫಲಿತಾಂಶ ಪಡೆದ ಶಾಲೆಗಳನ್ನು ಅಭಿನಂದಿಸಿದರು.

ಅಲ್ಲದೇ ಉತ್ತಮ ಫಲಿತಾಂಶಕ್ಕಾಗಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ಅಳವಡಿಸಿಕೊಳ್ಳಲು ಸೂಚಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಎಂ.ಬಿ.ತಹಶೀಲ್ದಾರ ಅವರು ಸಿಸಿಇ ಬಗ್ಗೆ ಇರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಸಿ.ಎಚ್.ಹೊಸಿಯಾ ಸಮಾಜ ವಿಜ್ಞಾನದ ಫಲಿತಾಂಶ ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ತಲುಪಬೇಕು ಎಂದರು.

ಅನಿತಾ ಕೆಲೂರ ಸ್ವಾಗತಿಸಿದರು, ಪಿ.ಸಿ.ವಲಮಣ್ಣವರ ವಂದಿಸಿದರು. ಎಂ.ಎಂ.ಬುಡನಖಾನ, ಪಿ.ಬಿ.ಶಿವಪುರ, ಆರ್.ಆರ್.ಕುಲಕರ್ಣಿ, ಆರ್.ವಿ.ಭೋಸಲೆ, ಎಂ.ಎಸ್.ದಾನಪ್ಪಗೌಡರ, ಜೆ.ಎಂ.ಗೋಕಾವಿ, ಎನ್.ಆರ್.ನಾಯಕ, ಎಚ್.ಕೆ.ಮತ್ತುಬಾಯಿ, ಆರ್.ಜಿ.ಮಂಬಾಶೆಟ್ಟಿ, ಎಂ.ಐ.ಹಳ್ಳದ, ಎಲ್.ಎಸ್.ಹೊಸಮನಿ, ವಿ.ಜಿ.ಪುನೀತ, ಎಂ.ಎಂ.ಪಾಟೀಲ, ಉಳ್ಳೀಗೇರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT