ಬೆಂಗಳೂರು: ನಾಮ ನಿರ್ದೇಶನದ ಮೂಲಕ ವಕ್ಫ್ ಮಂಡಳಿಗೆ ಸರ್ಕಾರ ನೇಮಿಸಿದ್ದ ಇಬ್ಬರ ಸದಸ್ಯತ್ವವನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.
ನಿಗದಿಪಡಿಸಿದ ಅರ್ಹತೆ ಇಲ್ಲದವರನ್ನು ವಕ್ಫ್ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ವಕ್ಫ್ ರಕ್ಷಣಾ ಜಂಟಿ ಸಮಿತಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ್ಗೌಡ ಅವರಿದ್ದ ಏಕಸದಸ್ಯ ಪೀಠ, ಅಲ್ಹಜ್ ನೂರ್ ಬಾಷಾ ಮತ್ತು ಮೌಲಾನ ಸೈಯದ್ ಮೊಹಮ್ಮದ್ ಇಬ್ರಾಹಿಂ ಅವರ ಸದಸ್ಯತ್ವವನ್ನು ರದ್ದುಪಡಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿದೆ.
ವಕ್ಫ್ ಮಂಡಳಿಯ ಸದಸ್ಯರಾಗಬೇಕಾದರೆ ಪ್ರತಿಷ್ಠಿತ ಮುಸ್ಲಿಂ ಸೇವಾ ಸಂಸ್ಥೆಯ ಸದಸ್ಯರಾಗಿರಬೇಕು ಮತ್ತು ಸಮಾಜದ ಯಾವುದಾದರೂ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಪಡೆದಿರಬೇಕು. ಆದರೆ, ಈ ಇಬ್ಬರು ಸದಸ್ಯರು ಈ ಅರ್ಹತೆಗಳನ್ನು ಪಡೆದಿಲ್ಲ ಎಂದು ಅರ್ಜಿದಾರರ ಪರ ವಕೀಲ ಬಿ.ಎ. ಬೆಳ್ಳಿಯಪ್ಪ ವಾದ ಮಂಡಿಸಿದರು.