ನೆಲಮಂಗಲ: ಇಲ್ಲಿಗೆ ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಮಾಚೋಹಳ್ಳಿಯಲ್ಲಿ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿರುವ ದುರ್ಘಟನೆ ಶನಿವಾರ ಮುಂಜಾನೆ ನಡೆದಿದೆ.
ಕೊಲೆಯಾದವರನ್ನು ಗಾಯತ್ರಿ ನಗರದ ಆಟೊ ಚಾಲಕ ಉಮೇಶ್ ಬಾಬು(35), ಲಗ್ಗೆರೆ ನಿವಾಸಿ ಮಂಜುನಾಥ್(34) ಎಂದು ಗುರುತಿಸಲಾಗಿದೆ. ಹಳೆ ವೈಷಮ್ಯ ಹಾಗೂ ಹಣಕಾಸು ವಿವಾದವೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಮಾಚೋಹಳ್ಳಿಯ ಟಕ್ಕರ್ಬಾಬಾ ಸಂಸ್ಥೆಯ(ಮಾಗಡಿ ರಸ್ತೆ) ಬಳಿ ಹಿಂಭಾಗ ಇವರಿಬ್ಬರ ಶವ ಪತ್ತೆಯಾಗಿದೆ.
ಶುಕ್ರವಾರ ರಾತ್ರಿ ಉಮೇಶ್ ಮತ್ತು ಮಂಜುನಾಥ್ ಇತರೆ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿದ್ದರು ಎಂದು ತಿಳಿದು ಬಂದಿದೆ. ಆದರೆ, ಮುಂಜಾನೆ ಅವರಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ರಾತ್ರಿ ಮದ್ಯದ ನಶೆಯಲ್ಲಿದ್ದಾಗ ಸ್ನೇಹಿತರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದು ಚಾಕುವಿನಿಂದ ಇರಿದು ಗುರುತು ಸಿಗಬಾರದೆಂದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರಬಹುದು. ಸ್ನೇಹಿತರು ಅಥವಾ ಪರಿಚಿತರು ಈ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆಯಾದವರ ಮೇಲೆ ಕಾಮಾಕ್ಷಿಪಾಳ್ಯ ಮತ್ತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಘಟನಾ ಸ್ಥಳಕ್ಕೆ ಐಜಿಪಿ ಅಮರ್ಕುಮಾರ್ ಪಾಂಡೆ, ಎಸ್ಪಿ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.