ಉಡುಪಿ: ಮಲ್ಪೆ ಕಡಲ ತೀರದಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮುಳುಗಿದ ವ್ಯಕ್ತಿಯೊಬ್ಬರನ್ನು ರಕ್ಷಿಸಲು ಯತ್ನಿಸಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ತಾವೂ ಅಲೆಯ ಅಬ್ಬರಕ್ಕೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ.
ಬೆಂಗಳೂರಿನ ಕತ್ತರಿಗುಪ್ಪೆ ಸಮೀಪದ ಖಾದಿ ಲೇಔಟ್ ನಿವಾಸಿಗಳಾದ ವಕೀಲ ಜಗದೀಶ್ ಮತ್ತು ಶೋಭಾ ದಂಪತಿಯ ಪುತ್ರ ಜೆ. ಗೌತಮ್ ಬಾಬು (22) ಮತ್ತು ದೊಡ್ಡಕಲ್ಲಸಂದ್ರದ ಸುವರ್ಣನಗರದ ಗೋವಿಂದನಾಯ್ಡು ಮತ್ತು ಪದ್ಮಾವತಿ ಅವರ ಮಗ ರೂಪೇಶ್ ಕುಮಾರ್ (21) ಮತ್ತು ಗುಂಡ್ಲುಪೇಟೆಯ ನಾಗರತ್ನಮ್ಮ ಪಿಯುಸಿ ಕಾಲೇಜಿನ ‘ಡಿ’ ದರ್ಜೆ ನೌಕರ ಸೋಮಶೇಖರ್ (30) ಮೃತಪಟ್ಟವರು. ಘಟನೆಯಲ್ಲಿ ಗೌತಮ್ ಅವರ ಗೆಳೆಯ ದಿಲೀಪ್ ಅವರೂ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗರತ್ನಮ್ಮ ಕಾಲೇಜಿನ ಸುಮಾರು 60 ವಿದ್ಯಾರ್ಥಿಗಳು, ಪ್ರಾಂಶುಪಾಲ, ಬೋಧಕ ಸಿಬ್ಬಂದಿ ಮತ್ತು ಸೋಮಶೇಖರ್ ಅವರೊಂದಿಗೆ ಮಲ್ಪೆ ಕಡಲ ತೀರಕ್ಕೆ ಬೆಳಿಗ್ಗೆ ಬಂದಿದ್ದರು. ಬೆಂಗಳೂರಿನ ಕತ್ತರಿಗುಪ್ಪೆಯ ಲಾರ್ಡ್ ಶ್ರೀಕೃಷ್ಣ ಎಜುಕೇಶನ್ ಸೊಸೈಟಿ ಕಾಲೇಜಿನಲ್ಲಿ (ಕೃಷ್ಣ ಡಿಗ್ರಿ ಕಾಲೇಜ್) ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದ ಗೌತಮ್, ರೂಪೇಶ್, ದಿಲೀಪ್ ಮತ್ತು ಅವರ 13 ಮಂದಿ ಸ್ನೇಹಿತರೂ ಪ್ರವಾಸಕ್ಕೆಂದು ಮಲ್ಪೆಗೆ ಬಂದಿದ್ದರು.
ಎಲ್ಲರೂ ಒಂದೇ ಸ್ಥಳದಲ್ಲಿ ನೀರಿಗಿಳಿದು ಆಟವಾಡುತ್ತಿದ್ದರು. ಅಲೆಗಳ ಮಧ್ಯೆ ಆಟವಾಡುತ್ತಿದ್ದ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಸೋಮಶೇಖರ್ ಅವರು ಕಡಲಿಗೆ ಇಳಿದಿದ್ದರು.
ಈ ಸಂದರ್ಭದಲ್ಲಿ ಸೋಮಶೇಖರ್ ಅವರು ಅಲೆಗಳ ಸೆಳೆತಕ್ಕೆ ಸಿಕ್ಕಿ ಮುಳುಗಿದರು ಮತ್ತು ಕೈ ಮೇಲಕ್ಕೆತ್ತಿ ಸಹಾಯಕ್ಕಾಗಿ ಕೂಗಿಕೊಂಡರು.
ಇದನ್ನು ನೋಡಿದ ಗೌತಮ್, ರೂಪೇಶ್ ಮತ್ತು ದಿಲೀಪ್ ಅವರು ಸಹಾಯಕ್ಕೆ ಮುಂದಾದಾಗ ಅಲೆಗಳ ಅಬ್ಬರ ಹೆಚ್ಚಾಗಿ ಎಲ್ಲರೂ ನೀರಿನಲ್ಲಿ ಮುಳುಗಿದರು.
ಇದನ್ನು ಗಮನಿಸಿದ ಸ್ಥಳೀಯರು ಮೂರೂ ಮಂದಿ ವಿದ್ಯಾರ್ಥಿಗಳನ್ನು ದಡಕ್ಕೆ ಎಳೆದು ತಂದರು. ಆ ವೇಳೆಗೆ ಇಬ್ಬರು ಮೃತಪಟ್ಟಿದ್ದರು. ಅಸ್ವಸ್ಥಗೊಂಡಿದ್ದ ದಿಲೀಪ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.
ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಸೋಮಶೇಖರ್ ಅವರ ಮೃತದೇಹ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಗೌತಮ್ ಮತ್ತು ಸ್ನೇಹಿತರು ಪ್ರವಾಸಕ್ಕೆಂದು ಬಂದಿದ್ದರು. ಭಾನುವಾರ ಬೆಂಗಳೂರಿನಿಂದ ಹೊರಟಿದ್ದ ಅವರು ಅದೇ ದಿನ ಗೋಕರ್ಣಕ್ಕೆ ಭೇಟಿ ನೀಡಿದ್ದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಮಲ್ಪೆಗೆ ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.