ಕೊಚ್ಚಿ (ಐಎಎನ್ಎಸ್): ಇಬ್ಬರು ಭಾರತೀಯ ಮೀನುಗಾರರನ್ನು ಕಡಲ್ಗಳ್ಳರೆಂದು ಭಾವಿಸಿ ಗುಂಡು ಹಾರಿಸಿ ಅವರ ಸಾವಿಗೆ ಕಾರಣರಾದ ಇಟಲಿಯ ಸರಕು ಸಾಗಣಿಕಾ ಹಡಗಿನ ಇಬ್ಬರು ಸಿಬ್ಬಂದಿಯನ್ನು ಭಾನುವಾರ ಸಂಜೆ ಹಡಗಿನಿಂದ ಕೆಳಗಿಳಿಸಿಕೊಂಡಿರುವ ಕೇರಳದ ಪೊಲೀಸರು ಇಲ್ಲಿನ ಕೇಂದ್ರೀಯ ಔದ್ಯೋಗಿಕ ಭದ್ರತಾ ದಳದ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ.
ಕೇರಳದ ಹಿರಿಯ ಪೊಲೀಸರು ಮತ್ತು ಇಟಲಿಯ ಅಧಿಕಾರಿಗಳ ತಂಡ ಸಂಜೆ 4.30ಕ್ಕೆ ಹಡಗಿನತ್ತ ಬಂದು, ಮೀನುಗಾರರ ಹತ್ಯೆ ಪ್ರಕರಣದ ಕುರಿತಂತೆ ಹಡಗಿನಲ್ಲಿದ್ದ ಇಬ್ಬರು ಭದ್ತತಾ ಸಿಬ್ಬಂದಿಯನ್ನು ಹಡಗಿನಿಂದ ಕೆಳಗಿಳಿಸಿಕೊಂಡು, ಬಿಗಿ ಭದ್ರತೆಯಲ್ಲಿ ಸನಿಹದ ಕೇಂದ್ರೀಯ ಔದ್ಯೋಗಿಕ ಭದ್ತತಾ ದಳದ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.
ಇಟಲಿಯ ಸರಕು ಸಾಗಣಿಕಾ ಹಡಗಿನ ಸಿಬ್ಬಂದಿಯನ್ನು ಹಡಗು `ಎನ್ರಿಕಾ ಲೆಕ್ಸಿ`ಯ ಸಮೇತ ಶುಕ್ರವಾರ ಕೊಚ್ಚಿಗೆ ಕರೆತರಲಾಗಿತ್ತು. ಶನಿವಾರ ತಡ ರಾತ್ರಿ ಆ ಹಡಗಿನ ಕ್ಯಾಪ್ಟನ್ ಮೀನುಗಾರರ ಹತ್ಯೆ ಪ್ರಕರಣದ ವಿಚಾರಣೆಗೆ ಸಹಕರಿಸಲು ಸಮ್ಮತಿಸಿದ್ದರು. ಭಾನುವಾರ ಆ ಹಡಗಿನ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.