ದಾವಣಗೆರೆ: ಕೇಂದ್ರ ಸರ್ಕಾರದ ಉದ್ದೇಶಿತ `ಕೋಮು ಹಿಂಸೆ ಹಾಗೂ ಯೋಜಿತ ದಾಳಿ ತಡೆ ಮಸೂದೆ~ಯು ರಾಷ್ಟ್ರದ ಜನಸಂಖ್ಯೆಯನ್ನು ಎರಡು ಭಾಗಗಳಾಗಿ ಮಾಡುವ ಅಪಾಯವಿದೆ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಶೋಕ ಸಾಹು ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಮತೀಯ ಹಿಂಸಾಚಾರ ತಡೆ ವಿಧೇಯಕ - 2011 ಒಂದು ಭಯಾನಕ ಕಾನೂನು ಎಂಬ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಡೀ ಜಗತ್ತು ಭಾರತೀಯ ಸಂಸ್ಕೃತಿಯತ್ತ ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಈ ಮಸೂದೆ ಜಾರಿಯಾದರೆ ಆಕ್ರಮಣ ಪ್ರವೃತ್ತಿ ಹೆಚ್ಚಾಗಿ, ಕೋಮು ಹಿಂಸೆಗೆ ಕಾರಣ ಆಗಬಹುದು. ಇದೊಂದು ಭಾರತೀಯ ಸಂಸ್ಕೃತಿ ನಾಶಪಡಿಸಲು ಹೂಡಿರುವ ಹುನ್ನಾರ ಎಂದು ದೂರಿದರು.
ಮಸೂದೆ ಕರಡು ಸಿದ್ಧಪಡಿಸಿರುವ ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಲಿ ತಂಡದಲ್ಲಿ ಸೋನಿಯಾ ಬಿಟ್ಟರೆ ಪಾಶ್ಚಿಮಾತ್ಯರೆ ಇದ್ದಾರೆ ಎಂದು ಆರೋಪಿಸಿದರು.
ಹಿಂದೂ ಪರ ಹೋರಾಟಗಾರರನ್ನು ಉದ್ದೇಶವಾಗಿ ಇಟ್ಟುಕೊಂಡು ರಚಿಸಿರುವ ಮಸೂದೆಯಿದು. ಇದುವರೆಗೂ ಕೋಮು ಗಲಭೆಗಳಿಗೆ ಹಿಂದೂಗಳು ಕಾರಣವಲ್ಲ. ಪರಿಶಿಷ್ಟ ಜಾತಿ/ ಪಂಗಡದವರನ್ನು ಹಿಂದೂ ಸಮಾಜದಿಂದ ಬೇರ್ಪಡಿಸುವ ಹುನ್ನಾರ ಅಡಗಿದೆ. ಯುಪಿಎ ಸರ್ಕಾರ ದೇಶವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದರು.
ಆರ್ಎಲ್ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ರೆಡ್ಡಿ, ದೀಪಕ್ ಕಾನಡೆ, ಬಿ.ಎಸ್. ಪೈ ಹಾಜರಿದ್ದರು.