ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನಿ ತಂಡದ 26 ಸದಸ್ಯರ ಬಂಧನ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನದ ಆಭರಣ ದೋಚುತ್ತಿದ್ದ ಆರೋಪದ ಮೇಲೆ `ಇರಾನಿ~ ತಂಡದ 26 ಸದಸ್ಯರನ್ನು ಬಂಧಿಸಿರುವ ಬೆಂಗಳೂರು ನಗರ ಪೊಲೀಸರ ವಿಶೇಷ ತಂಡ ಎರಡೂವರೆ ಕೆ.ಜಿ. ಚಿನ್ನಾಭರಣ ವಶಪಡಿಸಿಕೊಂಡಿದೆ.

`ಪೊಲೀಸರ ಸೋಗಿನಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಆಭರಣ ದೋಚುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಬೀದರ್‌ನ ಹುಸೇನಿ ಕಾಲೊನಿಯ ಇರಾನಿ ಗಲ್ಲಿಯಲ್ಲಿ ವಾಸ ಇರುವ ಕೆಲವರು ಈ ಕೃತ್ಯಗಳಲ್ಲಿ ತೊಡಗಿರುವುದು ಗೊತ್ತಾಯಿತು. ಆದ್ದರಿಂದ ಆರೋಪಿಗಳನ್ನು ಬಂಧಿಸಲು ಡಿಸಿಪಿಗಳಾದ ಬಿ.ಆರ್. ರವಿಕಾಂತೇಗೌಡ ಮತ್ತು ಎಸ್.ಎನ್. ಸಿದ್ದರಾಮಪ್ಪ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಇರಾನಿ ಗಲ್ಲಿ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಆರೋಪಿಗಳ ಬಂಧನದಿಂದ ನಗರದ ವಿವಿಧ ವಿಭಾಗಗಳಲ್ಲಿ ನಡೆದಿದ್ದ ಒಟ್ಟು ಐವತ್ತೈದು ಪ್ರಕರಣಗಳು ಪತ್ತೆಯಾಗಿವೆ. ದಾಳಿಯ ವೇಳೆ ಹೆಚ್ಚಿನ ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಪ್ರಕರಣಗಳಲ್ಲಿ ಭಾಗಿಯಾಗಿಲ್ಲದವರನ್ನು ಬಿಟ್ಟು ಕಳುಹಿಸಲಾಗಿದೆ. ಆಭರಣ ಕಳೆದುಕೊಂಡವರೇ ಆರೋಪಿಗಳನ್ನು ಗುರು ತಿಸಿದರು~ ಎಂದು ಅವರು ಮಾಹಿತಿ ನೀಡಿದರು.

`ಸಭ್ಯರಂತೆ ಬಟ್ಟೆಗಳನ್ನು ಧರಿಸುತ್ತಿದ್ದ ಆರೋಪಿಗಳು ನಗರದಲ್ಲಿ ಸಂಚರಿಸುತ್ತಿದ್ದರು. ಒಂಟಿ ಮಹಿಳೆಯರು ಅದರಲ್ಲೂ ವಯಸ್ಸಾಗಿರುವವರನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ಪೊಲೀಸರೆಂದು ಪರಿಚಯಿಸಿಕೊಳ್ಳುತ್ತಿದ್ದ ಅವರು ಮುಂದೆ ಕೊಲೆಯಾಗಿದೆ, ಗಲಾಟೆಯಾಗುತ್ತಿದೆ. ಆಭರಣಗಳನ್ನು ಬಿಚ್ಚಿಟ್ಟುಕೊಳ್ಳಿ ಎಂದು ಹೇಳಿ. ಆಭರಣಗಳನ್ನು ಬಿಚ್ಚಿದ ನಂತರ ಅದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿದ ಹಾಗೆ ನಾಟಕವಾಡಿ ಆಭರಣ ದೋಚುತ್ತಿದ್ದರು~ ಎಂದು ಎಸ್.ಎನ್. ಸಿದ್ದರಾಮಪ್ಪ ಹೇಳಿದರು.

`ಬೀದರ್‌ನಿಂದ ಬರುತ್ತಿದ್ದ ಅವರು ಇಲ್ಲಿ ಅಪರಾಧ ಎಸಗಿ ಊರಿಗೆ ಮರಳುತ್ತಿದ್ದರು. ಎಲ್ಲರೂ ಐಷಾರಾಮಿ ಜೀವನ ನಡೆಸುತ್ತಿದ್ದರು. ಹಲವು ಆರೋಪಿಗಳು ಮನೆಗೆ ಏರ್ ಕಂಡೀಷನರ್ ಅಳವಡಿಸಿಕೊಂಡಿದ್ದಾರೆ.

ದುಬಾರಿ ಬೆಲೆಯ ಎಲೆಕ್ಟ್ರಾನಿಕ್ ವಸ್ತುಗಳನ್ನೂ ಅವರು ಬಳಸುತ್ತಿದ್ದರು. ಪ್ರತಿಯೊಬ್ಬರ ಮನೆಯಲ್ಲೂ ಸೇಫ್ ಲಾಕರ್‌ಗಳಿವೆ. ಆಭರಣ ದೋಚಿ ಮಾರಾಟ ಮಾಡುತ್ತಿದ್ದ ಯುವಕರು ದೊಡ್ಡ ದೊಡ್ಡ ನಗರಗಳಿಗೆ ಹೋಗಿ           ಅಲ್ಲಿ ಉಳಿದು ಮೋಜು ಮಾಡುತ್ತಿದ್ದರು.  

ೆಲವೊಮ್ಮೆ ಅವರು ವಿಮಾನಗಳಲ್ಲಿಯೂ ಪ್ರಯಾಣಿಸುತ್ತಿದ್ದರು~ ಎಂದು ಅವರು ಮಾಹಿತಿ ನೀಡಿದರು.
`ಬೀದರ್ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ನಮ್ಮ ತಂಡ ಇರಾನಿ ಗಲ್ಲಿ ಮೇಲೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಆರೋಪಿಗಳು ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ ಹಿಮ್ಮೆಟ್ಟಿಸಲು ಯತ್ನಿಸಿದರು. ಆದರೆ ಎದೆಗುಂದದ ಸಿಬ್ಬಂದಿ ಧೈರ್ಯ ಪ್ರದರ್ಶಿಸಿ ಆರೋಪಿಗಳನ್ನು ವಶಕ್ಕೆ ಪಡೆದರು~ ಎಂದು ಬಿ.ಆರ್. ರವಿಕಾಂತೇಗೌಡ ಹೇಳಿದರು.

ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ:  ಕರ್ತವ್ಯ ಪ್ರಜ್ಞೆ ತೋರಿಸಿ ಪ್ರಕರಣಗಳನ್ನು ಭೇದಿಸಲು ಸಹಾಯ ಮಾಡಿದ ಪೊಲೀಸ್ ನಿಯಂತ್ರಣ ಕೊಠಡಿಯ ಕಾನ್‌ಸ್ಟೇಬಲ್ ಎಸ್.ಆರ್.ರಶ್ಮಿ, ದಕ್ಷಿಣ ವಿಭಾಗದ ನಿಯಂತ್ರಣ ಕೊಠಡಿಯ ಮುಖ್ಯ ಕಾನ್‌ಸ್ಟೇಬಲ್‌ಗಳಾದ ಬಸವರಾಜು, ವಾಸುದೇವಾಚಾರ್, ಆಡುಗೋಡಿ ಠಾಣೆಯ ಎಸ್‌ಐ ಸುಭಾಶ್‌ಚಂದ್ರ ಮತ್ತು ಕಾನ್‌ಸ್ಟೇಬಲ್ ನಂಜುಂಡಸ್ವಾಮಿ ಅವರನ್ನು ಕಮಿಷನರ್ ಸನ್ಮಾನಿಸಿದರು.
`ಯಾವುದೇ ಅಪರಾಧ ನಡೆದಾಗ ಜನರು ಪೊಲೀಸ್ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಈ ರೀತಿ ಮಾಹಿತಿ ನೀಡಿದರೆ ಆರೋಪಿಗಳನ್ನು ಬಂಧಿಸಲು ಮತ್ತು ಪ್ರಕರಣ ಭೇದಿಸಲು ಸಹಾಯವಾಗುತ್ತದೆ~ ಎಂದು ಮಿರ್ಜಿ ಮನವಿ ಮಾಡಿದರು.

ಎಸಿಪಿ ಗಚ್ಚಿನಕಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಪುನೀತ್ ಕುಮಾರ್, ತಿಪ್ಪೇಸ್ವಾಮಿ, ಎಸ್.ಕೆ. ಉಮೇಶ್, ಕೆ. ನಂಜುಂಡೇಗೌಡ, ಕೆಂಚೇಗೌಡ,   ನಾಗರಾಜು,  ಪ್ರೇಮಸಾಯಿ ಗುಂಡಪ್ಪ ರೈ, ಮಹೇಶ್, ಗುರುಪ್ರಸಾದ್, ಅನಿಲ್ ಕುಮಾರ್, ಮಿರ್ಜಾ ಆಲಿ ರಾಜಾ, ತನ್ವೀರ್ ಅಹಮ್ಮದ್, ಎಸ್‌ಐಗಳಾದ ಮಾರ್ಕಂಡಯ್ಯ, ಮುನಿರಾಜು, ರವಿ, ನವೀನ್ ಕುಮಾರ್, ಗಿರಿರಾಜ್, ಸಿರಾಜುದ್ದೀನ್ ಬಾಷಾ, ರಾಧಾಕೃಷ್ಣನ್, ಮಲ್ಲಿಕಾರ್ಜುನ್ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT