ನವದೆಹಲಿ (ಪಿಟಿಐ): ಪರಮಾಣು ಬಳಕೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಐರೋಪ್ಯ ದೇಶಗಳು ನಿರ್ಬಂಧ ವಿಧಿಸಿರುವುದರಿಂದ, ಆ ದೇಶದ ವಿವಿಧ ಕ್ಷೇತ್ರಗಳಲ್ಲಿ ಲಭ್ಯ ಇರುವ ವ್ಯವಹಾರ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಭಾರತ ಗಮನ ಹರಿಸಿದೆ.
ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ ನಿರ್ಬಂಧದ ನಂತರ ಇರಾನ್ನ ಹಲವಾರು ಕ್ಷೇತ್ರಗಳು ಬಿಕ್ಕಟ್ಟಿಗೆ ಸಿಲುಕಿವೆ.
ಇಂತಹ ಕ್ಷೇತ್ರಗಳನ್ನು ಗುರುತಿಸಿ ಅವುಗಳನ್ನು ಭಾರತ ಆಯ್ಕೆ ಮಾಡಿಕೊಂಡಿದ್ದು, ಆ ದೇಶದೊಂದಿಗೆ ವ್ಯಾಪಾರ ವೃದ್ಧಿಗೆ ಆದ್ಯತೆ ನೀಡಿದೆ.
ಯಾವ ಯಾವ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶ ಇದೆ ಎನ್ನುವುದನ್ನು ಗುರುತಿಸುವ ಸಲುವಾಗಿ ಭಾರತದ ವ್ಯಾಪಾರಿಗಳ ದೊಡ್ಡ ನಿಯೋಗ ಈ ತಿಂಗಳ ಅಂತ್ಯದಲ್ಲಿ ಇರಾನ್ಗೆ ಭೇಟಿ ನೀಡಲಿದೆ.
ಭಾರತದ ಉತ್ಪನ್ನಗಳನ್ನು ರಫ್ತು ಮಾಡುವ ಉದ್ದೇಶದಿಂದ ಈ ತಿಂಗಳ ಅಂತ್ಯದ ವೇಳೆಗೆ ದೊಡ್ಡ ನಿಯೋಗವೊಂದನ್ನು ಅಲ್ಲಿಗೆ ಕಳುಹಿಸಲಾಗುವುದು ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ತಿಳಿಸಿದರು.
ನಿಯೋಗದಲ್ಲಿ ವ್ಯಾಪಾರಿಗಳಷ್ಟೇ ಅಲ್ಲದೇ ಅಧಿಕಾರಿಗಳೂ ಇರುತ್ತಾರೆ. ತೈಲ ಆಮದಿಗಾಗಿ ಭಾರತ ಇರಾನ್ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ ಆ ದೇಶದ ಮೇಲೆ ನಿರ್ಬಂಧ ವಿಧಿಸಿದರೂ ಸಹ, ಭಾರತ ತನ್ನ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಮುಂದಾಗಿದೆ.