ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಿ ಜ್ವರಇರಲಿ ಎಚ್ಚರ

ಮಳೆ ಸುರಿಯಿತು ಎಂದರೆ ಇಲಿ ಜ್ವರದ ಕಾವೂ ಏರಿತು ಎಂದೇ ಅರ್ಥ. ಮಳೆಗಾಲದ ನಂತರ ಜಲಾವೃತಗೊಂಡ ವಾಸಸ್ಥಳಗಳಲ್ಲಿ ನಿಂತ ನೀರು ಇಲಿಗಳ ಮಲ ಮೂತ್ರಗಳಿಂದ ಇಲ್ಲವೆ  ಇಲಿ ಜ್ವರ ಸೋಂಕಿರುವ ಪ್ರಾಣಿಗಳ ಮೂತ್ರಗಳಿಂದ ಕಲುಷಿತಗೊಂಡು, ಬರಿಗಾಲಲ್ಲಿ ಓಡಾಡುವ ಜನರು ಸೋಂಕಿಗೀಡಾಗುತ್ತಾರೆ. 

ಲೆಪ್ಟೊಸ್ಪೈರೋಸಿಸ್ ಎಂದು ಕರೆಸಿಕೊಳ್ಳುವ ಈ ಜ್ವರ ಸಾಕುಪ್ರಾಣಿಗಳಾದ ದನ, ಎಮ್ಮೆ, ಕುರಿ, ಮೇಕೆ, ಹಂದಿ, ಕುದುರೆ ಮತ್ತು ನಾಯಿಗಳಲ್ಲಷ್ಟೇ ಅಲ್ಲದೆ, ನರಿ ಮತ್ತು ತೋಳಗಳಲ್ಲಿಯೂ ಕಂಡುಬಂದಿದೆ.

ಅರಣ್ಯ ನಾಶ, ಪಾಳು ಭೂಮಿಗಳನ್ನು ಸುಧಾರಣೆಗೊಳಿಸುವುದು, ಇಕ್ಕಟ್ಟಾದ ಚರಂಡಿಗಳು, ಜೌಗು ಪ್ರದೇಶಗಳು ಮತ್ತು ಕೃಷಿತಂತ್ರಜ್ಞಾನದಲ್ಲುಂಟಾದ ಬದಲಾವಣೆಗಳು ಇಲಿ ಜ್ವರ  ಹರಡಲು ಪೂರಕವಾಗಿವೆ.  ಈ ಕಾಯಿಲೆ, ಪ್ರವಾಹ, ಚಂಡಮಾರುತಗಳಂತಹ ನೈಸರ್ಗಿಕ ವಿಪತ್ತುಗಳಿಂದಾಗಿ ಹೆಚ್ಚಾಗಿ ಕಂಡುಬರುತ್ತದೆ.

ಔದ್ಯೋಗಿಕ ಗಂಡಾಂತರ ಎಂದು ಕುಖ್ಯಾತಿ ಪಡೆದಿರುವ ಈ ಕಾಯಿಲೆ ಕೃಷಿಕಾರ್ಮಿಕರು, ಬತ್ತ / ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವ ರೈತರು, ಚರಂಡಿ ನೈರ್ಮಲ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು, ಪಶುಪರಿಚಾರಕರು, ಅಧಿಕ ಮಳೆ ಬೀಳುವ, ಮಳೆ ನೀರು ಬಸಿದು ಹೋಗದೆ ಗಟಾರಗಳ ನಿರ್ವಹಣೆ ಸರಿಯಾಗಿ ಇಲ್ಲದೇ ಇರುವ ನಗರಗಳಲ್ಲಿ ಅತ್ಯಧಿಕವಾಗಿರುತ್ತದೆ.

ಸಾಮಾನ್ಯವಾಗಿ ನಾಯಿಗಳು ಈ ರೋಗದಿಂದ ಹೆಚ್ಚಾಗಿ ನರಳುವ ಸಂಭವವಿದ್ದು, ರೋಗದಿಂದ ಚೇತರಿಸಿಕೊಂಡ ನಾಯಿಗಳು, ಮನುಷ್ಯರಿಗೆ ಮತ್ತು ಇತರ ಸಾಕುಪ್ರಾಣಿಗಳಿಗೆ ರೋಗ ಹರಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ನಾಯಿಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ದೀರ್ಘಕಾಲದವರೆಗೆ ರೋಗವಾಹಕಗಳಾಗಿರುವುದರಿಂದ ಸಮುದಾಯ ಆರೋಗ್ಯ ಕಾಪಾಡುವವರಿಗೆ ದೊಡ್ಡ ಸವಾಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT