ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಮೂತ್ರ ವಿಸರ್ಜನೆಗೂ ಹಣ...!

ನಗರ ಸಂಚಾರ: ಅವ್ಯವಸ್ಥೆಯ ಆಗರ; ಜೆಎಸ್‌ಡಬ್ಲೂ ವಿಜಯನಗರ ಬಸ್‌ ನಿಲ್ದಾಣ
Last Updated 23 ಡಿಸೆಂಬರ್ 2013, 10:18 IST
ಅಕ್ಷರ ಗಾತ್ರ

ಹೊಸಪೇಟೆ: ಸಾಮಾನ್ಯವಾಗಿ ಬಸ್‌ ನಿಲ್ದಾಣ­ದಲ್ಲಿರುವ ಸಾರ್ವಜನಿಕ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆ ಉಚಿತ. ಇನ್ನೂ ಕೆಲವು ಬಸ್‌ ನಿಲ್ದಾಣಗಳ ಶೌಚಾಲಯಗಳಲ್ಲಿ ಮಹಿಳೆಯರ ಮೂತ್ರ ವಿಸರ್ಜನೆಗೆ ಮಾತ್ರ ಹಣ ಪಡೆಯುವ ವ್ಯವಸ್ಥೆ ಇರುತ್ತದೆ. ಆದರೆ ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಹೊಸಪೇಟೆಗೆ ಸಂಪೂರ್ಣ ಜೆಎಸ್‌ಡಬ್ಲ್ಯೂ ಸಂಸ್ಥೆ ಉಚಿತವಾಗಿ ನಿರ್ಮಾಣ ಮಾಡಿರುವ  ಜೆಎಸ್‌ಡಬ್ಲೂ ವಿಜಯನಗರ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಲು ಕಡ್ಡಾಯವಾಗಿ ₨ 2 ನಿೀಡಬೇಕು. ಒಂದು ವೇಳೆ ಹಣ ನೀಡಲು ನಿರಾಕರಿಸಿದರೆ ಅಂಥ ಪ್ರಯಾಣಿಕರೊಂದಿಗೆ ಗುತ್ತಿಗೆದಾರು ಜಗಳಕ್ಕಿಳಿಯುವುದು ನಿಶ್ಚಿತ.


ಹೊಸಪೇಟೆ ನಗರ ಪ್ರಮುಖ ಪ್ರವಾಸಿ ಕೇಂದ್ರವಾಗಿರುವುದರಿಂದ ಸಾಮಾನ್ಯವಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚು. ಗುತ್ತಿಗೆದಾರು ಮೂತ್ರ ವಿಸರ್ಜನೆಗೂ ಹಣ ನೀಡಬೇಕು ಎಂಬ ಅಲಿಖಿತ ನಿಯಮ ವಿಧಿಸುವ ಮೂಲಕ ಗುತ್ತಿಗೆದಾರರು ನಿಯಮ ಮೀರಿ ನಿತ್ಯ ಸಾವಿರಾರು ರೂಪಾಯಿ ಜೇಬಿಗೀಳಿಸುತ್ತಿದ್ದಾರೆ.

ಈ ಮೂಲಕ ಗುತ್ತಿಗೆ ಪಡೆಯುವಾಗ ಇಲಾಖೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಉಲ್ಲಂಘಿಸಿದ್ದಾರೆ.

ಬಸ್‌ ನಿಲ್ದಾಣ ಕಲುಷಿತ: ಹಣ ನೀಡಲು ಒಪ್ಪದ ಪ್ರಯಾಣಿಕರು ಬಸ್‌ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಬಸ್‌ ನಿಲ್ದಾಣದ ವಾತಾವರಣ ಕಲುಷಿತ­ಗೊಂಡಿದೆ. ಬಳ್ಳಾರಿಗೆ ಹೊರಡುವ ಬಸ್ಸುಗಳು ನಿಲ್ಲುವ ಸ್ಥಳದಲ್ಲಂತೂ ಪ್ರಯಾಣಿಕರು ಮೂಗು ಮುಚ್ಚಿಕೊಂಡೆ ನಡೆದಾಡುವ ಪರಿಸ್ಥಿತಿ ಇದೆ. ಈ ಜಾಗೆಯಲ್ಲಿರುವ ಹಳೆ ಮೂತ್ರಾಲಯ ಸಂಪೂರ್ಣ ಹಾಳಾಗಿದ್ದು, ಹಾಳಾದ ಮೂತ್ರಾಲ­ಯದಲ್ಲಿಯೆ ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಮುಂದಾಗುತ್ತಿದ್ದಾರೆ.

ಶೌಚಾಲಯಕ್ಕೆ ಹೋದರೆ ₨ 2 ಕೊಡಬೇಕು ಎಂಬ ಕಾರಣಕ್ಕೆ ಪ್ರಯಾ­ಣಿಕರು ಬಸ್‌ ನಿಲ್ದಾಣದ ದಾರಿ, ತಡೆಗೋಡೆ ಹೀಗೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಬಸ್‌ ನಿಲ್ದಾಣದ ಆಚೆಗೂ ಮೂತ್ರ ವಿಸರ್ಜನೆ ವಾಸನೆ ಹರಡಿಕೊಂಡಿರುತ್ತದೆ.

ಆರೋಪ: ಶೌಚಾಲಯ ಗುತ್ತಿಗೆ ನಿಯಮ­ಗಳನ್ನು ಮೀರಿ ಗುತ್ತಿಗೆದಾರರು ಪ್ರಯಾಣಿಕರಿಂದ ಮೂತ್ರ ವಿಸರ್ಜನೆಗೂ ಹಣ ಪಡೆಯುತ್ತಿರು­ವುದು ಅಧಿಕಾರಿಗಳ ಗಮನಕ್ಕೆ ಬಂದರೂ ಅಧಿಕಾ­ರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿ­ಸುತ್ತಿದ್ದಾರೆ. ಗುತ್ತಿಗೆದಾ­ರರು ಹೀಗೆ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ ಎಂದು ಕೆಲ ಪ್ರಯಾ­ಣಿಕರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಗುತ್ತಿಗೆದಾರರ ವಿರುದ್ಧ ಲಿಖಿತವಾಗಿ ದೂರು ನೀಡಿದರೆ ಆ ಕುರಿತು ಪರಿಶೀಲಿಸುತ್ತೇವೆ. ಮೂತ್ರ ವಿಸರ್ಜನೆಗೂ ಹಣ ಪಡೆದರೆ ಗುತ್ತಿಗೆ­ದಾ­ರರಿಗೆ ₨ 500 ದಂಡ ವಿಧಿಸಲಾಗುವುದು ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂಬುದು ಪ್ರಯಾಣಿಕರ ಆರೋಪ.

‘ಬಸ್‌ ನಿಲ್ದಾಣದಲ್ಲಿನ ಶೌಚಾಲಯ ಗುತ್ತಿಗೆ ಪಡೆದ ಗುತ್ತಿಗೆದಾರರು ಪ್ರಯಾಣಿಕರಿಂದ ಮೂತ್ರ ವಿಸರ್ಜನೆಗೂ ಹಣ ಪಡೆಯುವ ಮೂಲಕ ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಕುರಿತು ಈಶಾನ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾವ್‌, ‘ಬಸ್‌ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆಗೆ ಹಣ ಪಡೆಯುತ್ತಿರುವ ಕುರಿತು ಪ್ರಯಾಣಿಕರು ಲಿಖಿತವಾಗಿ ದೂರು ನೀಡಿದರೆ, ಆ ಕುರಿತು ಪರಿಶೀಲಿಸಲಾಗುವುದು. ಒಂದು ವೇಳೆ ಹಣ ವಸೂಲಿ ಮಾಡುತ್ತಿರುವುದು ಖಚಿತವಾದರೆ ಗುತ್ತಿಗೆದಾರರಿಗೆ ₨ 500 ದಂಡ ವಿಧಿಸಲಾಗುವುದು’ ಎಂದು ಹೇಳಿದರು.

ನಗರದ ಜೆಎಸ್‌ಡ್ಲೂ ವಿಜಯನಗರ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಬಳ್ಳಾರಿ ಜಿಲ್ಲೆಯ ಜೆಎಸ್‌ಡಬ್ಲೂ ಕಂಪೆನಿ ₨ 12 ಕೋಟಿ ದೇಣಿಗೆ ನೀಡಿದೆ. ಹೀಗೆ ಇಂಥ ದಾನಿಗಳಿಂದ ನಿರ್ಮಾ­ಣ­ವಾಗಿರುವ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆಗೂ ಹಣ ಪಡೆಯುತ್ತಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಮತ್ತು ಇಲಾಖೆ ತನ್ನ ಹಣದಲ್ಲಿ ಇಂತಹ ಸುಂದರ ನಿಲ್ದಾಣವನ್ನು ಸ್ವಚ್ಛವಾಗಿಡುವ ಹಾಗೂ ನಿರ್ವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ನಡೆಸಬೇಕು ಎಂದು ಹಿರಿಯ ನಾಗರಿಕ ಎಸ್‌.ಎನ್‌.ಪಿ. ಪಾಟೀಲ್‌ ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT