ನವದೆಹಲಿ (ಪಿಟಿಐ): ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ, ಕರ್ನಾಟಕದ ಖ್ಯಾತ ಹಿಂದೂಸ್ತಾನಿ ಗಾಯಕ ರಾಜಶೇಖರ ಮನ್ಸೂರ್, ಜಾನಪದ ತಜ್ಞ ಗೊ.ರು. ಚನ್ನಬಸಪ್ಪ ಹಾಗೂ ವಯೋಲಿನ್ ವಾದಕ ಮೈಸೂರು ಎಂ. ನಾಗರಾಜ್ ಸೇರಿದಂತೆ ಸಂಗೀತ, ನಾಟಕ, ನೃತ್ಯ, ಗೊಂಬೆಯಾಟ ಕ್ಷೇತ್ರದ ಒಟ್ಟು 36 ಜನರು 2012ರ ಸಾಲಿನ ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರತಿ ಕ್ಷೇತ್ರದಿಂದ 9ಜನರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ತಾಮ್ರ ಪತ್ರ,ಅಂಗವಸ್ತ್ರಗಳನ್ನು ಒಳಗೊಂಡಿದೆ. ವಯೋಲಿನ್ ವಾದಕ ಎನ್. ರಾಜಂ, ಟಿ.ಎಚ್. ವಿನಾಯಕರಾಂ ಮತ್ತು ರತನ್ ತಿಯಾಮ್ ಅವರನ್ನು ಮೂರು ಲಕ್ಷ ರೂಪಾಯಿ ಮೊತ್ತದ ಸಂಗೀತ, ನಾಟಕ ಅಕಾಡೆಮಿ ಫೆಲೋಶಿಪ್ಗಳಿಗೆ ಆಯ್ಕೆ ಮಾಡಲಾಗಿದೆ.
ಸಂಗೀತ: ಇಳಯರಾಜ (ಸೃಜನಾತ್ಮಕ ಮತ್ತು ಪ್ರಯೋಗಾತ್ಮಕ ಸಂಗೀತ), ರಾಜಶೇಖರ ಮನ್ಸೂರ್, ಅಜಯ್ ಪೋಹಂಕರ್ (ಹಿಂದೂಸ್ತಾನಿ ಸಂಗೀತ), ಸಬೀರ್ ಖಾನ್ (ತಬಲಾ), ಬಹಾವುದ್ದೀನ್ ಡಗರ್ (ರುದ್ರ ವೀಣಾ), ಕೆ.ವಿ ಪ್ರಸಾದ್ (ಮೃದಂಗ), ಭಾಯ್ ಬಲ್ಬೀರ್ ಸಿಂಗ್ ರಾಗಿ (ಗುರ್ಬಾನಿ) ಸೇರಿದಂತೆ ಒಟ್ಟು 9 ಜನ ಸಂಗೀತಗಾರರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನೃತ್ಯ: ಪ್ರಿಯದರ್ಶಿನಿ ಗೋವಿಂದ್ (ಭರತನಾಟ್ಯಂ), ವಿಜಯ್ ಶಂಕರ್ (ಕಥಕ್), ವೇದಾತಂ ರಾಮಲಿಂಗ ಶಾಸ್ತ್ರಿ (ಕೂಚಿಪುಡಿ), ವಿ. ವಿಜಯನ್ (ಕಥಕ್ಕಳಿ), ಶರ್ಮಿಳಾ ಬಿಸ್ವಾಸ್ (ಒಡಿಶಿ), ಜೈ ನಾರಾಯಣ ಸಮಾಲ್ (ಛೌವು), ಪೇಂಕುಳಂ ದಾಮೋದರ್ ಚಕ್ಯಾರ್ (ಕೂಡಿಯಾಟ್ಟಂ), ಜ್ವಾಲಾ ಪ್ರಸಾದ್ (ನೃತ್ಯ ಸಂಗೀತ), ಅದಿತಿ ಮಂಗಲದಾಸ್ (ಸೃಜನಾತ್ಮಕ ಮತ್ತು ಪ್ರಯೋಗಾತ್ಮಕ ನೃತ್ಯ).
ನಾಟಕ-ರಂಗಭೂಮಿ: ಅರ್ಜುನ್ ದೇವ್ ಚರಣ್ (ನಾಟಕ ರಚನೆ), ತ್ರಿಪುರಾರಿ ಶರ್ಮಾ, ವಾಮನ್ ಕೇಂದ್ರೆ (ರಂಗ ನಿರ್ದೇಶನ) ನಿರ್ಮಲ್ ರಿಷಿ ಮತ್ತು ಪುರಿಸಾಯಿ ಕಣ್ಣಪ್ಪ ಸಂಬಂಧನ್ (ನಟನೆ), ಮುರಾರಿ ರಾಯ್ ಚೌಧರಿ (ಸಂಗೀತ), ಗುಲಾಮ್ ರಸೂಲ್ ಭಗತ್ (ಸಾಂಪ್ರದಾಯಿಕ ನಾಟಕ),
ಜಾನಪದ ನಾಟಕ: ಗೊ.ರು. ಚನ್ನಬಸಪ್ಪ (ಜಾನಪದ ಸಂಗೀತ-ಕನ್ನಡ), ಕಿನರಾಂನಾಥ್ ಓಜಾ (ಅಸ್ಸಾಂ), ಪ್ರೇಮ್ ಸಿಂಗ್ (ಹರ್ಯಾಣ), ಸುಲೋಚನಾ ಚವಾಣ್ (ಲಾವಣಿ- ಮಹಾರಾಷ್ಟ್ರ), ಮತ್ತನೂರು ಶಂಕರನ್ ಕುಟ್ಟಿ ಮರಾರ್ (ಕೇರಳ), ಗೋವಿಂದ್ ರಾಂ ನಿರ್ಮಲ್ಕರ್ (ಛತ್ತೀಸ್ಗಡ), ಹೀರಾದಾಸ್ ನೇಗಿ (ಮುಖವಾಡ-ಹಿಮಾಚಲ ಪ್ರದೇಶ),ಪ್ರಫುಲ್ ಕರ್ಮಾಕರ್ (ಸಾಂಪ್ರದಾಯಿಕ ಬೊಂಬೆಯಾಟ-ಪಶ್ಚಮ ಬಂಗಾಳ) ಮತ್ತು ಪ್ರದರ್ಶನ ಕಲಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ನಂದಿನಿ ರಮಣಿ ಮತ್ತು ಅರುಣ್ ಕಾಕಡೆ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.