ಬಸವನಬಾಗೇವಾಡಿ: ನಿರ್ಮಾಪಕ ಶ್ರೀನಿವಾಸರಾಜು ಅವರು ನಿರ್ಮಿಸಲು ಮುಂದಾದ `ಇವ ಬಸವಣ್ಣ' ಚಲನಚಿತ್ರದಲ್ಲಿ ಬಸವಣ್ಣನವರಿಗೆ ಅಪಮಾನ ಮಾಡುವ ರೀತಿಯಲ್ಲಿ ನಟ ಉಪೇಂದ್ರ ಅವರಿಗೆ ವಸ್ತ್ರ ವಿನ್ಯಾಸ ಮಾಡಿರುವುದನ್ನು ಇಲ್ಲಿಯ ವಿವಿಧ ಸಂಘಟನೆಯವರು ಖಂಡಿಸಿದ್ದಾರೆ.
ಈ ಕುರಿತು ಜಂಟಿ ಪ್ರಕಟಣೆ ನೀಡಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಲ.ರು.ಗೊಳಸಂಗಿ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಸಿ.ಎಂ.ಮೇಟಿ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಚಲನಚಿತ್ರ ಚಿತ್ರಿಕರಣಕೊಳ್ಳದಂತೆ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಸವಣ್ಣನವರ ವೇಷ ಧರಿಸಿದ ಉಪೇಂದ್ರ ಅವರು ಕೊರಳಲ್ಲಿ ಲಿಂಗ ಹಾಗೂ ಜನಿವಾರ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಎಲ್ಲವನ್ನು ಸರ್ವನಾಶ ಮಾಡುವ ಕೋಪಾಗ್ನಿ ಸನ್ನಿವೇಶವು ಕೆಲ ಪತ್ರಿಕೆಗಳ ಜಾಹಿರಾತಿನಲ್ಲಿ ಪ್ರಕಟಗೊಂಡಿದೆ. ಈ ಸನ್ನಿವೇಶವು ಬಸವಣ್ಣನವರ ಅಭಿಮಾನಿಗಳಿಗೆ ನೋವನ್ನುಂಟುಮಾಡಿದೆ.