ಅಳ್ನಾವರ: ತುತ್ತು ಅನ್ನಕ್ಕಾಗಿ ಕುಲ ಕಸುಬು ಹುಡುಕಿಕೊಂಡು ಅಲೆದಾಡುತ್ತಿರುವ ಮಧ್ಯಪ್ರದೇಶ ರಾಜ್ಯದ ಕುಟುಂಬ ಕಳೆದೆರಡು ದಿನಗಳಿಂದ ಅಳ್ನಾವರದ ಬಸ್ ನಿಲ್ದಾಣದ ಪಕ್ಕದ ಬಯಲು ಪ್ರದೇಶದಲ್ಲಿ ಬೀಡು ಬಿಟ್ಟಿದೆ.
ಕೃಷಿ ಹಾಗೂ ಮನೆಗೆ ಉಪಯೋಗಿಸುವ ಉಪಕರಣಗಳನ್ನು ಕಬ್ಬಿಣ ಕಾಯಿಸಿ ಶುದ್ಧ ರೂಪ ನೀಡುವ ಕಲಾ ನಿಪುಣರು. ಈ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಪಟ್ಟಣದಲ್ಲಿ ಕಂಡುಬಂತು. ಹಿರಿಯರು ಉಪಕರಣ ತಯಾರಿಸಿದರೆ, ಯುವಕರು ಮಾರಾಟ ಮಾಡುತ್ತಾರೆ.
ಮಧ್ಯಪ್ರದೇಶ ಮತ್ತು ರಾಜಸ್ತಾನ ಗಡಿ ಭಾಗದ ಮುಕಸುಂದನಾಗಾರ್ಡ್ ಗ್ರಾಮದ ನಿವಾಸಿಗಳಾದ ಈ ಕುಟುಂಬ, ಮಳೆಗಾಲ ಹೊರತು ಪಡಿಸಿ ಉಳಿದ ದಿನಗಳಲ್ಲಿ ಬೇರೆ ಪ್ರದೇಶಕ್ಕೆ ಹೋಗಿ ಕಬ್ಬಿಣದ ಕೊಡಲಿ, ಕೋಯ್ತಾ, ಕುಡಗೋಲು, ಪುಟ್ಟ ಚಾಕು, ಚಿನ್ನಿ , ಇಳಗಿ ಮುಂತಾದ ಉಪಕರಣ ಮಾರಾಟ ಮಾಡುತ್ತಾ ಬದುಕು ಸಾಗಿಸುತ್ತಿದ್ದಾರೆ.
‘ನಮ್ಮ ರಾಜ್ಯದ ಸರ್ಕಾರಗಳಿಗೆ ಚುನಾವಣೆ ಬಂದಾಗ ಮಾತ್ರ ನಮ್ಮ ನೆನಪು ಬರುತ್ತದೆ. ನಮ್ಮ ಬವಣೆ ಕೇಳುವವರಿಲ್ಲ. ಯಾವ ಸರ್ಕಾರ ಬಂದರೇನು, ಹೋದರೇನು ನಮ್ಮ ಗೋಳು ಕೇಳುವವರಿಲ್ಲ’ ಎನ್ನುತ್ತಾ ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ ಮತ ಚಲಾಯಿಸಿದ ಬೆರಳು ತೋರಿಸುತ್ತಾ ಹೇಳುತ್ತಾರೆ ಕುಟುಂಬದ ಮುಖ್ಯಸ್ಥ ಶಂಕರ ರಾಠೋಡ.
‘ಇದೇ ನಮ್ಮ ಕುಲ ಕಸುಬು. ಪರಂಪರೆ ಮುಂದುವರೆಸುತ್ತಾ ಸಾಗಿರುವ ನಾವು ದುಡಿಮೆ ನಂಬಿ ಬದುಕಿದವರು. ಕೃಷಿ ಪ್ರದೇಶದ ಹೆಚ್ಚಾಗಿರುವ ಗ್ರಾಮಾಂತರ ಭಾಗದಲ್ಲಿ ಕಬ್ಬು ಕಟಾವು ಕಾರ್ಯ ನಡೆದಿದ್ದರಿಂದ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಇದೆ. ಬಂದ ಆದಾಯದಿಂದ ನಮ್ಮ ಕಟುಂಬ ಜೀವನ ಸಾಗುತ್ತದೆ. ಉಪಪರಣಗಳನ್ನು ಸಮೀಪದ ಸಂತೆ, ಮಾರುಕಟ್ಟೆಗಳಲ್ಲಿ ಸಂಚರಿಸಿ ಮಾರುತ್ತೇವೆ’ ಎಂದು ಅವರು ವಿವರಿಸಿದರು.
ಕೊರೆಯುವ ಚಳಿಯಲ್ಲಿ ತಮ್ಮ ಪುಟ್ಟ ಕಂದಮ್ಮಗಳನ್ನು ಬಗಲಲ್ಲಿ ಇಟ್ಟುಕೊಂಡು ಹಗಲು– ರಾತ್ರಿ ಎನ್ನದೇ ತಮ್ಮ ಕಸುಬು ನಂಬಿ ಸಾಗುತ್ತಿರುವ ಇವರ ಬದುಕಿನ ಪಯಣ ಎತ್ತ ಸಾಗುತ್ತಿದೆ ಎಂಬ ನಿರ್ದಿಷ್ಟ ಗುರಿ ಇವರಿಗಿಲ್ಲ. ‘ಮಕ್ಕಳು ಶಾಲೆ ಬಿಟ್ಟು ಕುಟುಂಬದ ಮೋಹದಿಂದ ತಮ್ಮ ಜೊತೆಯಲ್ಲಿ ಸಾಗುತ್ತಿದ್ದಾರೆ. ಮಕ್ಕಳಿಗೆ ವಿದ್ಯೆ ಕಲಿಯಲು ಸಾಧ್ಯವಾಗುತ್ತಿಲ್ಲ’ ಎಂದು ನೋವಿನಿಂದ ನುಡಿಯುತ್ತಾರೆ ಶಂಕರ.
ಇವರ ಜೊತೆ ಸುಮಾರು 60 ಜನರ ತಂಡ ಇಲ್ಲಿಗೆ ಬಂದಿದೆ. ದಸರಾ, ದೀಪಾವಳಿಯ ನಂತರ ತಮ್ಮ ಊರನ್ನು ತೊರೆದಿರುವ ಇವರು ಮಳೆಗಾಲದ ನಾಲ್ಕು ತಿಂಗಳು ಮಾತ್ರ ಮೂಲ ಗ್ರಾಮಗಳಿಗೆ ತೆರಳುತ್ತಾರೆ. ಉಪಕರಣ ತಯಾರಿಸಲು ಸಮೀಪದ ದೊಡ್ಡ ಪಟ್ಟಣದಿಂದ ಕಚ್ಚಾ ಸಾಮಗ್ರಿ ತರುತ್ತಾರೆ. ಇವರಿಗೆ ಇಲ್ಲಿನ ಆಹಾರ ಹಿಡಿಸದು. ಅವರ ಜೊತೆ ಪಯಣದ ಹೆಜ್ಜೆ ಹಾಕಿರುವ ಮಹಿಳೆಯರು ತಮ್ಮ ಅಡುಗೆ ಮಾಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.