ವಿಜಾಪುರ: ಇಲ್ಲಿಯ ಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಭಾರ ಎತ್ತುವ ಸ್ಪರ್ಧೆಯಲ್ಲಿ ಗ್ರಾಮೀಣ ಪ್ರದೇಶದ ಸಾಹಸಿಗಳು ಉತ್ಸುಕತೆಯಿಂದ ಪಾಲ್ಗೊಂಡಿದ್ದರು.
ತೆಕ್ಕೆ ಬಡಿದು ಚೀಲ ಎತ್ತುವ ಸ್ಪರ್ಧೆಯಲ್ಲಿ 185 ಕೆ.ಜಿ. ಭಾರದ ಚೀಲ ಎತ್ತುವ ಮೂಲಕ ಚಂದ್ರಶೇಖರ ಯಾಳವಾರ ಹಾಗೂ ಸಿದರಾಯ ಜಗದೇವಿ ಅವರು ಪ್ರಥಮ ಬಹುಮಾನ ಹಂಚಿ ಕೊಂಡರು.
ಗುಂಡುಗಲ್ಲು ಎತ್ತುವ ಸ್ಪರ್ಧೆಯಲ್ಲಿ ಸಿದರಾಯ ಜಗದೇವಿ-165 ಕೆ.ಜಿ. (ಪ್ರಥಮ), ತುಕಾರಾಮ ವಿಲಾಸ ಭಾರತಿ -135 ಕೆ.ಜಿ (ದ್ವಿತೀಯ), ಆನಂದ ಅಗಸಬಾಳ-130 ಕೆ.ಜಿ. (ತೃತೀಯ) ಸ್ಥಾನ ಪಡೆದರು.
ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಯಲಗೂರ ಗ್ರಾಮದ ಗಂಗಾಧರ ಹ. ಶಿರೂರ ಅವರು 275 ಕೆ.ಜಿ. ಉಸುಕಿನ ಚೀಲವನ್ನು ಏಳುಬಾರಿ ಎತ್ತುವ ಮೂಲಕ ಸಾಹಸ ಮೆರೆದರು.
ಮೆಟ್ನಾಲಿಗೆ ಮೇಲೆ ನಿಂತು ಭಾರ ಎತ್ತುವ ಸ್ಪರ್ಧೆಯಲ್ಲಿ 60 ವರ್ಷ ವಯೋಮಾನದ ಸಿದ್ಧಪ್ಪ ಹಳ್ಳಿ-60 ಕೆ.ಜಿ. ಭಾರದ ಚೀಲ ಎತ್ತುವ ಮೂಲಕ ಪ್ರಥಮ ಬಹುಮಾನ ಗಿಟ್ಟಿಸಿಕೊಂಡರು.
ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಗಿರಿಮಲ್ಲಪ್ಪ ಚಮಕೇರಿ ಅವರು 85 ಕೆ.ಜಿ. ಭಾರದ ಕಲ್ಲನ್ನು ಮೂರು ಬಾರಿ ಎತ್ತಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. ಇದೇ ಕಲ್ಲನ್ನು ಎರಡು ಬಾರಿ ಎತ್ತಿದ ರಮೇಶ ಶಿವಪ್ಪ ದಡ್ಡಿಮನಿ ದ್ವಿತೀಯ, 80 ಕೆ.ಜಿ. ತೂಕದ ಕಲ್ಲನ್ನು ಎರಡು ಬಾರಿ ಎತ್ತಿದ ಸಂಜು ಶಿವಪ್ಪ ಹೊನ ವಾಡ ತೃತೀಯ ಸ್ಥಾನ ಪಡೆದರು.
ಹಾರಿ ಎತ್ತುವ ಸ್ಪರ್ಧೆಯಲ್ಲಿ ಮುಳ ಸಾವಳಗಿಯ ರಮೇಶ ಪಾಟೀಲ 30 ಕೆ.ಜಿ. ಭಾರದ ಕಬ್ಬಿಣದ ಹಾರಿ (ಸಲಾಕೆ)ಯನ್ನು ಹಲ್ಲಿನಿಂದ ಎತ್ತಿ ಪ್ರಥಮ ಬಹುಮಾನ ಪಡೆದರು.
ಒತ್ತಗಲ್ಲು ಎತ್ತುವ ಸ್ಪರ್ಧೆಯಲ್ಲಿ ಕುಂಟೋಜಿಯ ಮಲ್ಲು ತಳವಾರ 101 ಕೆ.ಜಿ. ಭಾರದ ಕಲ್ಲನ್ನು ಏಳುಬಾರಿ ಎತ್ತಿ ಪ್ರಥಮ, ಇದೇ ಕಲ್ಲನ್ನು ಆರು ಬಾರಿ ಎತ್ತಿದ ತಾಯಪ್ಪ ನಿಂಗಪ್ಪ ಕೆಂದೂರ ದ್ವಿತೀಯ, ಕುಂಟೋಜಿಯ ಲಕ್ಕಣ್ಣ ಕೋರಿ ತೃತೀಯ ಸ್ಥಾನ ಪಡೆದುಕೊಂಡರು.
ಎಡಗೈಯಲ್ಲಿ ಚೀಲ ಎತ್ತುವ ಸ್ಪರ್ಧೆಯಲ್ಲಿ ಮಸಬಿನಾಳದ ಶಿವಾನಂದ ಕತ್ನಳ್ಳಿ 100 ಕೆ.ಜಿ. ಚೀಲ ಎತ್ತಿಕೊಂಡು ಸಿದ್ಧೇಶ್ವರ ದೇವಸ್ಥಾನ ಸುತ್ತಿ ಬಂದರು. ಅವರಿಗೆ ಪ್ರಥಮ ಬಹುಮಾನ ನೀಡಲಾಯಿತು.
ಜಾತ್ರಾ ಸಮಿತಿಯ ಚೇರಮನ್ ಬಸಯ್ಯೊ ಹಿರೇಮಠ ಸ್ಪರ್ಧೆ ಉದ್ಘಾಟಿಸಿದರು. ಭಾರ ಎತ್ತುವ ಸಮಿತಿಯ ಪದಾಧಿಕಾರಿಗಳಾದ ಮಹಾದೇವ ಜಂಗಮಶೆಟ್ಟಿ, ಮಹಾದೇವ ಕಕ್ಕಮರಿ, ಸಾಯಬಣ್ಣ ಭೋವಿ, ಶಿವಪ್ಪ ಜಂಗಮಶೆಟ್ಟಿ, ನಾಗಪ್ಪ ಗುಗ್ಗರಿ, ಮುತ್ತಪ್ಪ ಹಳ್ಳಿ, ಬಸವರಾಜ ಕಕ್ಕಳಮೇಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.