ಬೆಂಗಳೂರು: ಸಚಿವರಾಗಿದ್ದಾಗಲೇ ಕೊನೆಯುಸಿರೆಳೆದ ರಾಜ್ಯದ ನಾಲ್ವರು ಸಚಿವರ ಸಾಲಿಗೆ ಈಗ ಡಾ.ವಿ.ಎಸ್.ಆಚಾರ್ಯ ಸೇರ್ಪಡೆಯಾಗಿದ್ದಾರೆ.
ನಜೀರ್ ಸಾಬ್ 1988ರ ಅಕ್ಟೋಬರ್ 24ರಂದು ವಿಧಿವಶರಾದಾಗ ಎಸ್.ಆರ್.ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವರಾಗಿದ್ದರು. ಎಸ್.ಬಂಗಾರಪ್ಪ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಕೆ.ಎಚ್.ಪಾಟೀಲ್ ಅವರು 1992ರ ಫೆ.9ರಂದು ನಿಧನರಾದರು. ಎಂ.ವೀರಪ್ಪ ಮೊಯಿಲಿ ಸಂಪುಟದಲ್ಲಿ ಲಾಟರಿ ಮತ್ತು ಸಣ್ಣ ಉಳಿತಾಯ ಖಾತೆ ಸಚಿವರಾಗಿದ್ದ ತಿಪಟೂರಿನ ಟಿ.ಎಂ.ಮಂಜುನಾಥ್ 1994ರ ಮೇ 21ರಂದು ಕೊನೆಯುಸಿರೆಳೆದರು.
ಮಂಡ್ಯದ ಎಸ್.ಡಿ.ಜಯರಾಂ ಅವರು 1998ರ ಜನವರಿ 27ರಂದು ನಿಧನರಾದರು. ಆಗ ಅವರು, ಜೆ.ಎಚ್.ಪಟೇಲ್ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿದ್ದರು.
ಸಚಿವರಾಗಿದ್ದಾಗ ನಿಧನ ಹೊಂದಿದ ಈ ನಾಲ್ಕು ಮಂದಿಯ ಸಾಲಿಗೆ ಈಗ ಆಚಾರ್ಯ ಸೇರಿದ್ದಾರೆ. ಸದಾನಂದ ಗೌಡರ ಸಂಪುಟದಲ್ಲಿ ಆಚಾರ್ಯ ಅವರು ಉನ್ನತ ಶಿಕ್ಷಣ, ಯೋಜನೆ, ಮುಜರಾಯಿ ಮತ್ತು ಐಟಿ-ಬಿಟಿ ಸಚಿವರಾಗಿದ್ದರು.