ಬಾಗೇಪಲ್ಲಿ: ಪೈಪೋಟಿ ಯುಗದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ಮಾಡಿ, ಉತ್ತಮ ಅಂಕ ಪಡೆದು, ಸಮಾಜದಲ್ಲಿ ಸತ್ಪ್ರಜೆಗಳಾಗಬೇಕು ಎಂದು ಕರ್ನಾಟಕ ಕಾರಾಗೃಹಗಳ ಉಪಮಹಾನಿರೀಕ್ಷಕ (ಡಿಐಜಿ) ವಿ.ಎಸ್.ರಾಜ ತಿಳಿಸಿದರು.
ತಾಲ್ಲೂಕಿನ ಚೇಳೂರಿನಲ್ಲಿ ಗುರುವಾರ ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಒಕ್ಕೂಟ ಹಮ್ಮಿಕೊಂಡಿದ್ದ ‘ಗುರುವಂದನಾ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು ಗುರುಗಳು ವಿದ್ಯಾರ್ಥಿ ಜೀವನದ ದಾರಿದೀಪ ಆಗಿದ್ದಾರೆ. ಕಷ್ಟಪಟ್ಟು ವ್ಯಾಸಂಗ ಮಾಡುವುದಕ್ಕಿಂತ ಇಷ್ಟ ಪಟ್ಟು ವ್ಯಾಸಂಗ ಮಾಡಬೇಕು ಎಂದು ಸಲಹೆ ನೀಡಿದರು.
ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎನ್.ವಿ.ವೆಂಕಟಶಿವಾರೆಡ್ಡಿ ಮಾತನಾಡಿ, ಇದೀಗ ತರಗತಿಗಳಲ್ಲಿ ಪಾಠ–ಪ್ರವಚನ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸಭೆ, ಮಾಹಿತಿಗಳು, ಗಣತಿಗಳಿಗೆ ಆಯೋಜನೆ, ಅಕ್ಷರ ದಾಸೋಹ, ಕ್ಷೀರಭಾಗ್ಯದಂಥ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಿದೆ. ಇದರಿಂದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಮಟ್ಟ ಕುಸಿತವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಭಾಗ್ಯಶ್ರೀ ಅವರ ಭರತನಾಟ್ಯ ಜನಮನಸೂರೆಗೊಂಡಿತು. ಎ.ಅಜಿತ್ ಪ್ರಸಾದ್, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಉಪಸಮನ್ವಾಧಿಕಾರಿ ಕೆ.ಮಂಜುನಾಥ್, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಕೆ.ವೆಂಕಟೇಶ್, ಕೆ.ಜಿ.ರಂಗಯ್ಯ, ಡಿವೈಎಸ್ಪಿ ಸಣ್ಣತಿಮ್ಮಯ್ಯ, ಹಳೇ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾದ ಪಿ.ಜಯರಾಮರೆಡ್ಡಿ, ಮಹಮದ್ ಗೌಸ್, ಎಸ್.ಎನ್.ಸುಧಾಕರ್, ಸಿ.ಪಿ.ಸುಬ್ಬಾರೆಡ್ಡಿ, ಪಿ.ಎಸ್.ರಾಜಗೋಪಾಲ್, ಎಂ.ಜಯರಾಮರೆಡ್ಡಿ, ಡಾ.ಬಿ.ಎನ್.ನಾರಾಯಣರೆಡ್ಡಿ, ಪ್ರಸಾದ್, ತಿಪ್ಪಣ್ಣ, ಲಕ್ಷ್ಮೀನಾರಾಯಣಪ್ಪ, ಅಶ್ವಥ್ಥನಾರಾಯಣರೆಡ್ಡಿ, ಷಡಾಕ್ಷರಿ, ನಾರಾಯಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪಿ.ಎಸ್.ರವೀಂದ್ರನಾಥ್, ನಿವೃತ್ತ ಮುಖ್ಯಶಿಕ್ಷಕರಾದ ಎಸ್.ವಿ.ಕೃಷ್ಣಮೂರ್ತಿ, ಬಿ.ಎಂ.ನಾಗಭೂಷಣಾರಾಧ್ಯ, ಎನ್.ಎ.ಸತ್ಯನಾರಾಯಣರಾವ್ ಅವರಿಗೆ ಚೇಳೂರು ಹಳೇ ವಿದ್ಯಾರ್ಥಿಗಳ ಒಕ್ಕೂಟದಿಂದ ಗುರುವಂದನೆ ಸಲ್ಲಿಸಿ ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.