ಬೆಂಗಳೂರು: ನಗರದ ವಸಂತಪುರದ ವೈಕುಂಠ ಹಿಲ್ನ ಇಸ್ಕಾನ್ ಕೃಷ್ಣಲೀಲಾ ಥೀಮ್ ಪಾರ್ಕ್ನಲ್ಲಿ ತಡೆಗೋಡೆ ಕುಸಿದು ಮೃತಪಟ್ಟ, ಗಾಯಗೊಂಡವರ ಕುಟುಂಬಕ್ಕೆ ಬುಧವಾರ ಪರಿಹಾರ ವಿತರಿಸಲಾಯಿತು.
ಮಂಡ್ಯದ ತೋಪಾಲಯ್ಯ, ಆರು ವರ್ಷದ ಜಯ ಹಾಗೂ ಕನಕಪುರದ ಚನ್ನಗಿರಿಯಪ್ಪ ಮೃತಪಟ್ಟಿದ್ದರು. ಇವರ ಕುಟುಂಬ ಸದಸ್ಯರಿಗೆ ತಲಾ ರೂ.4.5 ಲಕ್ಷ ಪರಿಹಾರ ನೀಡಲಾಯಿತು. ಈ ಮೊದಲೇ ತಲಾ ರೂ.50 ಸಾವಿರ ಪರಿಹಾರ ನೀಡಲಾಗಿತ್ತು.
ಘಟನೆಯಲ್ಲಿ ವೆಂಕಟೇಶ್, ವರಪ್ರಾದ್, ಮೇಲುಸ್ವಾಮಿ, ಮುರುಗೇಶ್, ಸರಸ್ವತಿ ಎಂಬವರು ಗಾಯಗೊಂಡಿದ್ದರು. ಇವರಿಗೆ ತಲಾ ರೂ.50 ಸಾವಿರ ಪರಿಹಾರ ವಿತರಿಸಲಾಯಿತು.
ಘಟನೆಯಲ್ಲಿ ಗಂಭೀರ ಗಾಯಗೊಂಡು ನಗರದ ಬಿಜಿಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಡು ವರ್ಷದ ಬಾಲಕ ಲಕ್ಷ್ಮೀಕಾಂತ್ ಎಂಬಾತನಿಗೆ ರೂ.3 ಲಕ್ಷ ಪರಿಹಾರ ನೀಡಲಾಯಿತು. ಈತನ ಆಸ್ಪತ್ರೆಯ ವೆಚ್ಚ ರೂ.2 ಲಕ್ಷವನ್ನು ಬಿಬಿಎಂಪಿಯೇ ಭರಿಸಲಿದೆ.
ಪರಿಹಾರ ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ‘ಈಗಿರುವ ತಡೆಗೋಡೆಯನ್ನು ತೆರವುಗೊಳಿಸಿ 20 ಅಡಿ ಹಿಂಭಾಗಕ್ಕೆ ತಡೆಗೋಡೆ ನಿರ್ಮಾಣ ಮಾಡಲು ಸೂಚಿಸಲಾಗಿದೆ. ಘಟನೆಯಿಂದ ನೊಂದವರಿಗೆ ಅಗತ್ಯ ನೆರವು ನೀಡಲಾಗುವುದು’ ಎಂದರು.
‘ಆರು ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಆರು ಮನೆಗಳಿಗೆ ಸ್ವಲ್ಪ ಹಾನಿಯಾಗಿದೆ. ಆರು ಮನೆಗಳನ್ನು ಇಸ್ಕಾನ್ ಸಂಸ್ಥೆ ಕಟ್ಟಿಸಿಕೊಡಲಿದೆ. ಉಳಿದ ಮನೆಗಳನ್ನು ದುರಸ್ತಿ ಮಾಡಿ ಕೊಡಲಿದೆ. ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಬಾಡಿಗೆ ಮನೆಯ ವ್ಯವಸ್ಥೆ ಮಾಡಲಾಗಿದೆ’ ಎಂದರು. ಶಾಸಕ ಎಂ.ಕೃಷ್ಣಪ್ಪ ಇದ್ದರು.