ಚಿಕ್ಕಬಳ್ಳಾಪುರ: ಸಿಎಸ್ಐ ಕ್ರೈಸ್ಟ್ ಚರ್ಚ್ ಅಸ್ತಿತ್ವಕ್ಕೆ ಬಂದಿರುವುದರ ಹಿಂದೆ ಸುಮಾರು 132 ವರ್ಷಗಳ ಇತಿಹಾಸವಿದೆ. 1994ರಲ್ಲಿ ನಗರದ ಪ್ರವಾಸಿ ಮಂದಿರದ ಎದುರು ನೂತನ ಕಟ್ಟಡ ನಿರ್ಮಿಸಲಾಯಿತು. ಆಗಿನಿಂದ ಪ್ರತಿ ವರ್ಷವೂ ನೂತನ ಕಟ್ಟಡದಲ್ಲಿ ದೈನಂದಿನ ಮತ್ತು ವಿಶೇಷ ಪ್ರಾರ್ಥನೆಗಳಲ್ಲದೇ ಪ್ರತಿ ವರ್ಷವೂ ಹಬ್ಬ ಆಚರಿಸಲಾಗುತ್ತಿದೆ.
1877–78ರ ವರ್ಷದ ಆಸುಪಾಸಿನಲ್ಲಿ ಚಿಕ್ಕಬಳ್ಳಾಪುರ ಸೇರಿದಂತೆ ಎಲ್ಲೆಡೆ ಭೀಕರ ಕ್ಷಾಮ ತಲೆದೋರಿದ್ದವು. ಜನರು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಸಹ ಎದುರಿಸಿದರು. ಆಗ ಬಂದ ಕ್ರೈಸ್ತ ಮಿಷನರಿಗಳು ಜನರಿಗೆ ಸಾಂತ್ವನ ತೋರಿದ್ದಲ್ಲದೇ ಆತ್ಮವಿಶ್ವಾಸ ತುಂಬಲು ಸಹ ಪ್ರಯತ್ನಿಸಿದರು. ಈ ಎಲ್ಲ ಸಮಸ್ಯೆಗಳನ್ನು ಅರಿತು ಮಿಷನರಿಗಳಾದ ಸ್ಯಾಮಸನ್ ಡೇವಿಡ್, ಆರೋಗ್ಯಂ ಮತ್ತು ಭದ್ರಪ್ಪ ಎಂಬುವರನ್ನು ಚಿಕ್ಕಬಳ್ಳಾಪುರಕ್ಕೆ ಕಳುಹಿಸಿಕೊಟ್ಟರು.
ಜೀವನ ಉತ್ತಮಪಡಿಸಿಕೊಳ್ಳುವುದು ಹೇಗೆ, ಬದುಕನ್ನು ಸುಧಾರಿಸಿಕೊಳ್ಳುವುದು ಹೇಗೆ ಎಂಬುದರಿಂದ ಹಿಡಿದು ಹಲವಾರು ವಿಷಯಗಳನ್ನು ತಿಳಿಸಿದರು.
1892ರಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದ ಲಂಡನ್ ಮಿಷನ್ ಸಂಘದ ಆರ್.ಪಿ.ರೈಸ್, ಆರ್.ಎ.ಹಿಕ್ಲಿಂಗ್ ಮತ್ತು ಕೇಯಿನ್ಸ್ ಅವರು ಕ್ರೈಸ್ತ ಧರ್ಮ ಸೇವೆ ಮುಂದುವರೆಸಿದರು.
ಕ್ರೈಸ್ತ ಸಭಾ ಪಿತಾಮಹಾ ಎಂದೇ ಕರೆಯಲ್ಪಡುವ ಆರ್.ಎ.ಹಿಕ್ಲಿಂಗ್ ಅವರು 1892ರ ಮಾರ್ಚ್ 8 ರಿಂದ 1893ರ ಜನವರಿ 11ರವರೆಗೆ ಮನೆಯೇ ಇಲ್ಲದೇ ಚಿತ್ರಾವತಿಯ ತೋಪಿನಲ್ಲಿ ತಾತ್ಕಾಲಿಕವಾಗಿ ಗುಡಾರ ಕಟ್ಟಿಕೊಂಡು ವಾಸವಿದ್ದು, ಸೇವೆ ಸಲ್ಲಿಸಲು ಆರಂಭಿಸಿದರು. ಪುಟ್ಟ ಮನೆಯೊಂದರಲ್ಲಿ ಶುರುವಾದ ಚರ್ಚ್ ನಂತರದ ವರ್ಷಗಳಲ್ಲಿ ಪ್ರಾಮುಖ್ಯತೆ ಪಡೆಯತೊಡಗಿತು. ಕಾಲಾನುಕ್ರಮದಲ್ಲಿ ಈಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಬಳಿಯಿರುವ ಹಿಕ್ಲಿಂಗ್ ಸ್ಮಾರಕ ಚರ್ಚ್ ನಿರ್ಮಿಸಲಾಯಿತು. ನಂತರ 1994ರಲ್ಲಿ ಪ್ರವಾಸಿ ಮಂದಿರದ ಎದುರು ಚರ್ಚ್ಗೆಂದೇ ನೂತನ ಕಟ್ಟಡ ನಿರ್ಮಿಸಲಾಯಿತು. ಆಗಿನಿಂದ ಇಲ್ಲಿಯೇ ಪ್ರಾರ್ಥನೆ ಮತ್ತು ಹಬ್ಬದ ಆಚರಣೆ ಮುಂದುವರೆದಿದೆ’ ಎಂದು ಚರ್ಚ್ನ ಗೌರವ ಖಜಾಂಚಿ ಡಿ.ಅರುಣ್ಕುಮಾರ್ ತಿಳಿಸಿದರು.
‘ಕ್ರಿಸ್ಮಸ್ ಹಬ್ಬದ ಆಚರಣೆಗೆಂದೇ ಈ ಬಾರಿ 22 ಅಡಿ ಎತ್ತರದ ನಕ್ಷತ್ರ ಸಿದ್ಧಪಡಿಸಿದ್ದೇವೆ. ಬೆತ್ಲ್ಹೆಮ್ನಲ್ಲಿ ಏಸು ಜನಿಸಿದ ಸಂದರ್ಭದ ವಾತಾವರಣವನ್ನು ಪುನರ್ ಸೃಷ್ಟಿಸಿದ್ದೇವೆ. ನಾವು ಮಂಗಳವಾರ ಸಂಜೆ 6.30ರ ಸುಮಾರಿಗೆ ಮೇಣದ ಬತ್ತಿಗಳಿಂದ ಆರಾಧಿಸಿ, ಬುಧವಾರ ಬೆಳಿಗ್ಗೆ 6.30ಕ್ಕೆ ಕ್ರೈಸ್ತ ಜಯಂತಿಯ ವಿಶೇಷ ಆರಾಧನೆ ಮಾಡುತ್ತೇವೆ’ ಎಂದು ಚರ್ಚ್ನ ಸಭಾಪಾಲಕರಾದ ರೆವರೆಂಡ್ ಶೈಲಶ್ರೀ ಸುರೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.