ರಟ್ಟೀಹಳ್ಳಿ: ಸಮೀಪದ ಕಮಲಾಪುರ ಗ್ರಾಮದಲ್ಲಿ ಸಾಯುವುದೂ ಕಷ್ಟ. ಇಲ್ಲಿರುವ ಸ್ಮಶಾನ ನೋಡಿದರೆ ಈ ಅಭಿಪ್ರಾಯ ಖಂಡಿತ ಬರುತ್ತದೆ. ಸಂಸ್ಕಾರ ಮಾಡಲು ಶವವನ್ನು ಹೊತ್ತುಕೊಂಡು ಕಲ್ಲು- ಮುಳ್ಳು ಹಾದಿಯನ್ನು ದಾಟಿ, ಗುಡ್ಡ ಹತ್ತಿ ಸ್ಮಶಾನಕ್ಕೆ ಹೋಗಬೇಕು. ಇದರಿಂದಾಗಿ ಶವ ಸಂಸ್ಕಾರ ಮಾಡುವವರಿಗೆ ತುಂಬಾ ತೊಂದರೆಯಾಗುತ್ತಿದೆ.
ಕಮಲಾಪುರ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿ ಜಿಲ್ಲೆಯಲ್ಲಿಯೇ ಹಿಂದುಳಿದ ಗ್ರಾಮವಾಗಿ ಗುರುತಿಸಿಕೊಂಡಿದೆ.
ತಾಲ್ಲೂಕು ಕೇಂದ್ರದಿಂದ 42ಕಿಮೀ. ದೂರದಲ್ಲಿ ರುವ ಮತ್ತು ತಾಲೂಕಿನ ಗಡಿಗ್ರಾಮವಾದ ಕಮಲಾಪುರದಲ್ಲಿ ಅಭಿವೃದ್ಧಿಯ ಒಂದೇ ಒಂದು ಗುರುತು ಸಿಗುವುದಿಲ್ಲ.
ಸ್ಮಶಾನ ಕೂಡ ಸ್ವಚ್ಛವಾಗಿಲ್ಲ. ಇದನ್ನು ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಯನ್ನು ಕೇಳಿಕೊಂಡರೆ ಪಂಚಾಯಿತಿ ಜಾಣ ಕಿವುಡುತನವನ್ನು ಪ್ರದರ್ಶಿಸುತ್ತಿದೆ. ಎನ್ಆರ್ಐಜಿ ಯೋಜನೆಯಡಿಯಲ್ಲಿ ಗ್ರಾಮದ ಅಭಿವೃದ್ಧಿಗೆ 28 ಲಕ್ಷ ರೂ. ಮಂಜೂರಾದರೂ ಕೇವಲ 2 ಲಕ್ಷ ಖರ್ಚು ಮಾಡಲಾಗಿದೆ. ಸರಿಯಾದ ಮಾರ್ಗದರ್ಶನವಿಲ್ಲದೇ ಗ್ರಾಮಸ್ಥರು ಕೈಚೆಲ್ಲಿ ಕುಳಿತಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಕೈ ಚೆಲ್ಲಿ ಕುಳಿತಿರುವುದರಿಂದ ಬಂದ ಹಣ ವಾಪಸ್ ಹೋಗಬೇಕಾದ ಭೀತಿ ಇದೆ.
ತಾಪಂ ಸದಸ್ಯ ಬಸವರಾಜಪ್ಪ ಧೂಳಪ್ಪನವರ, ಗ್ರಾಮ ಪಂಚಾಯಿತಿ ಸದಸ್ಯರಾದ ಈರಪ್ಪ ಮುದೇನೂರ. ವಿಜಯ ಬಲ್ಮುರಿ. ರವೀಂದ್ರ ಸಣ್ಣಣಜಿ. ಗಣೇಶ ಸಣ್ಣಣಜಿ. ಸಿದ್ದಪ್ಪ ಸಣ್ಣಣಜಿ. ಕರಿಯಪ್ಪ ದೊಡ್ಡಣಜಿ. ಕರಬಸಪ್ಪ ಕುಮ್ಮಣ್ಣ ನವರ. ಶೇಖರಪ್ಪ ಸಣ್ಣಣಜಿ. ರುದ್ರಪ್ಪ ಚೂರಿ. ನಾಗಪ್ಪ ಯರಳ್ಳಿ. ಗಂಗಪ್ಪ ಚೂರಿ. ಕರಬಸಪ್ಪ ಕುಂಸಿ ಇವರಲ್ಲಿ ಗ್ರಾಮಸ್ಥರು ಗಡಿ ಗ್ರಾಮ ಕಮಲಾಪುರವನ್ನು ಅಭಿವೃದ್ಧಿಪಡಿಸುವಂತೆ ಕೇಳಿಕೊಂಡಿದ್ದಾರೆ.
ಕಲ್ಲುಮುಳ್ಳಿನ ಹಾದಿ...
ರಟ್ಟೀಹಳ್ಳಿ ಸಮೀಪದ ಕಮಲಾಪುರ ಗ್ರಾಮದಲ್ಲಿರುವ ಸ್ಮಾಶನದಲ್ಲಿ ಶವ ಸಂಸ್ಕಾರ ಮಾಡುವ ಯಾವ ವ್ಯವಸ್ಥೆಯೂ ಇಲ್ಲ. ಸ್ಮಶಾನಕ್ಕೆ ಹೋಗುವುದೇಒಂದು ಸಾಹಸ. ಕಲ್ಲುಮುಳ್ಳಿಯ ಹಾದಿಯನ್ನು ದಾಟಿ, ಗುಡ್ಡ ಹತ್ತಬೇಕು. ಅಲ್ಲಿದೆ ಸ್ಮಶಾನ. ಗಿಡಗಂಟೆಗಳಿರುವ ಈ ಜಾಗದಲ್ಲಿ ಶವ ಸಂಸ್ಕಾರ ಮಾಡಬೇಕು. ಇಲ್ಲಿಯ ಜನರಿಗೆ ಶವ ಸಂಸ್ಕಾರ ಮಾಡುವುದೆಂದರೆ ಸಾವಿನಷ್ಟೇ ನೋವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.