ಧಾರವಾಡ: ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸುವ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಇಲ್ಲಿನ ಮಾರುಕಟ್ಟೆಯಲ್ಲಿ ಗುಟ್ಕಾ ಬೆಲೆ ಗಗನಕ್ಕೇರಿದೆ. ಸುಪ್ರಿಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಗುಟ್ಕಾ ನಿಷೇಧಿಸಲಾಗುವುದು ಎಂದು ಸರ್ಕಾರ ಗುರುವಾರ ಘೋಷಿಸಿದ ಬೆನ್ನಲ್ಲೇ ಶುಕ್ರವಾರ ನಗರದಲ್ಲಿ ಗುಟ್ಕಾ ಬೆಲೆ ಏರಿಕೆಯಾಗುವುದರ ಜೊತೆ ಕೃತಕ ಅಭಾವ ಕೂಡಾ ಸೃಷ್ಟಿಯಾಗಿದೆ.
ಇದುವರೆಗೆ ಮಾರುಕಟ್ಟೆಯಲ್ಲಿ 2.50 ರೂಪಾಯಿಗೆ ದೊರೆಯುತ್ತಿದ್ದ ಗುಟ್ಕಾ ಪ್ರತಿ ಚೀಟಿಗೆ 5 ರೂಪಾಯಿ ಆಗಿದೆ. ಅದೇ ರೀತಿ ಇನ್ನೊಂದು ಬ್ರಾಂಡಿನ ಗುಟ್ಕಾ 10ರಿಂದ 12 ರೂಪಾಯಿಗೆ ದೊರೆಯುತ್ತಿತ್ತು. ಶುಕ್ರವಾರ ಅದರ ಬೆಲೆ 25 ರೂಪಾಯಿಗೆ ಏರಿದೆ. ಅಲ್ಲದೇ ಬೀಡಿ ಅಂಗಡಿಯವರಿಗೆ ಗುಟ್ಕಾ ಸರಬರಾಜು ಮಾಡುತ್ತಿದ್ದವರು ಕೇಳಿದಷ್ಟು ಪಾಕೆಟ್ ನೀಡುತ್ತಿಲ್ಲ. ಸರ್ಕಾರ ಗುಟ್ಕಾ ನಿಷೇಧಿಲೇಬೇಕು ಎನ್ನುವ ಗಟ್ಟಿ ನಿರ್ಧಾರ ಮಾಡಿದ್ದರೆ, 15 ದಿನ ಕಾಲಾವಕಾಶ ನೀಡಿ, ಈಗಾಗಲೇ ಖರೀದಿಸಿರುವ ಮಾಲನ್ನು ಮಾರಿದ ನಂತರ ನಿಷೇಧಿಸಬೇಕು.
ನಿಷೇಧವೆಂದರೆ ಅದು ಸಂಪೂರ್ಣ ನಿಷೇಧವಾಗಿರಬೇಕು. ಇಲ್ಲದಿದ್ದರೆ ಮುಕ್ತವಾಗಿ ಮಾರಲು ಅವಕಾಶ ಮಾಡಿಕೊಡಬೇಕು. ಹಾಗಾಗದಿದ್ದರೆ, ಡೀಲರ್ಗಳು ಕೃತಕ ಅಭಾವ ಸೃಷ್ಟಿಸಿ, ಉರಿಯುವ ಮನೆಯಲ್ಲಿ ಗಳ ಹಿರಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅಲ್ಲದೇ ಏಕಾಏಕಿ ಬೆಲೆ ಏರಿಕೆಯಾಗುವುದರಿಂದ ಗ್ರಾಹಕರ ಜೊತೆ ನಾವು ಜಗಳ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಿಗುವ ಅಲ್ಪ ಲಾಭಕ್ಕಾಗಿ ಕಿರಿ, ಕಿರಿ ಏಕೆ ಎನ್ನುತ್ತಾರೆ ಬೀಡಿ ಅಂಗಡಿ ಮಾಲೀಕ ಕರುಣಾಕರಶೆಟ್ಟಿ.