ಕೈರೊ (ಪಿಟಿಐ): ಈಜಿಪ್ಟ್ನಲ್ಲಿ ಕ್ರಾಂತಿ ಮೂಲಕ ಹೋಸ್ನಿ ಮುಬಾರಕ್ ಅವರ 30 ವರ್ಷದ ಆಡಳಿತ ಕೊನೆಗೊಳಿಸಲು ನಡೆಸಿದ ಕ್ರಾಂತಿಗೆ ಒಂದು ವರ್ಷ ಸಂದ ಪ್ರಯುಕ್ತ ರಾಜಧಾನಿ ಕೈರೊದಲ್ಲಿ ಬುಧವಾರ ವಾರ್ಷಿಕೋತ್ಸವ ಆಚರಿಸಲಾಯಿತು.
ಈಜಿಪ್ಟ್ ಜನರು ಒಂದು ವರ್ಷದ ಹಿಂದೆ ಆರಂಭಿಸಿದ್ದ ಕ್ರಾಂತಿ ಕೊನೆಗೊಂಡ ಸ್ಥಳವಾದ ಇಲ್ಲಿನ ತೆಹ್ರಿರ್ ಚೌಕ್ನಲ್ಲಿ ಸೇರಿ ಸಂಭ್ರಮಿಸಿದರು. ಕ್ರಾಂತಿಯ ಸ್ಮರಣೆಗಾಗಿ ವಾರ್ಷಿಕೋತ್ಸವ ಆಚರಿಸಿದರು.
ಈಜಿಪ್ಟ್ ಸರ್ಕಾರ ಮತ್ತು ದೇಶದ ಸೇನಾಡಳಿತ ಚಳವಳಿಯಲ್ಲಿ ಗಾಯಗೊಂಡವರಿಗೆ ಸರ್ಕಾರಿ ನೌಕರಿ ನೀಡಲು ಸಮ್ಮತಿಸಿದೆ. ಗಾಯಗೊಂಡವರಿಗೆ ಪರಿಹಾರ ನೀಡುವ ಕೆಲಸ ಅಂತಿಮ ಹಂತದಲ್ಲಿದೆ. ಕ್ರಾಂತಿಯಲ್ಲಿ ಮಡಿದವವರಿಗೆ ಸಂಬಂಧಿಸಿದಂತೆ ಸತ್ಯ ಶೋಧನಾ ಸಮಿತಿಯನ್ನು ರಚಿಸಲು ಸೋಮವಾರ ನಡೆದ ಸಂಸತ್ತಿನಲ್ಲಿ ನಿರ್ಧರಿಸಲಾಗಿದೆ. ತೆಹ್ರಿರ್ ಚೌಕದಲ್ಲಿ ವಾರ್ಷಿಕೋತ್ಸವ ಆಚರಿಸುತ್ತಿರುವ ಸ್ಥಳಕ್ಕೆ ನಿಯೋಗವೊಂದನ್ನು ಕಳುಹಿಸಿ ಚಳವಳಿಯ ಉದ್ದೇಶಗಳನ್ನು ಈಡೇರಿಸಲಾಗುವುದು ಎಂಬ ಭರವಸೆಯನ್ನೂ ನೀಡಿದೆ.
ಈಜಿಪ್ಟ್ ಕ್ರಾಂತಿಯಲ್ಲಿ ಕನಿಷ್ಠ 846 ಜನ ಮೃತಪಟ್ಟು 6 ಸಾವಿರ ಜನ ಗಾಯಗೊಂಡಿದ್ದರು. ಮುಬಾರಕ್ ಪದಚ್ಯುತಿಯೊಂದಿಗೆ ರಾಷ್ಟ್ರದಲ್ಲಿದ್ದ ತುರ್ತುಪರಿಸ್ಥಿತಿ ಕೊನೆಗೊಂಡಿದೆ ಎಂದು ಸಶಸ್ತ್ರ ಪಡೆಗಳ ಅತ್ಯುನ್ನತ ಮಂಡಳಿಯ (ಎಸ್ಸಿಎಎಫ್) ಮುಖ್ಯಸ್ಥ ಫೀ.ಮಾ. ಹುಸೇನ್ ತಾಂತವಿ ಅವರು ವಾರ್ಷಿಕೋತ್ಸವಕ್ಕೆ ಮುನ್ನ ಘೋಷಿಸಿದ್ದಾರೆ.