ಮಲೇಬೆನ್ನೂರು: ವಿವಿಧ ಸಮಾಜದ ಜನತೆ ಹಬ್ಬವನ್ನು ಸಂತೋಷ ಸಡಗರದಿಂದ ಆಚರಿಸುವುದರೊಂದಿಗೆ ಸಮಾಜದಲ್ಲಿ ಶಾಂತಿ-ಸಾಮರಸ್ಯ ಕಾಪಾಡಲು ಸಹಕರಿಸಿ ಎಂದು ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ನಾಗರಿಕರಲ್ಲಿ ಮನವಿ ಮಾಡಿದರು. ಇಲ್ಲಿನ ಪೊಲೀಸ್ಠಾಣೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಾಂತಿಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಇಲ್ಲಿ ಹಿಂದೆ ಸಂಭವಿಸಿದ ಘಟನೆಗಳು ಗ್ರಾಮಕ್ಕೆ ಕೆಟ್ಟ ಹೆಸರು ತಂದಿದೆ. ವಿವಿಧ ಕೋಮಿನ ಜನತೆ ಭವಿಷ್ಯದಲ್ಲಿ ದುರ್ಘಟನೆ ಪುನರಾವರ್ತನೆ ಮಾಡಬೇಡಿ ಎಂದರು.
ತಾ.ಪಂ. ಮಾಜಿ ಸದಸ್ಯ ಜಾಮಿಯಾ ಮಸೀದಿ ಮುತಾವಲಿ ಮೊಹ್ಮದ್ ರೋಷನ್ ಹಾಗೂ ಜಿಲ್ಲಾ ಕುರುಬ ಸಮಾಜದ ಗೌರವಾಧ್ಯಕ್ಷ ಕೆ.ಪಿ. ಸಿದ್ದಬಸಪ್ಪ ಶಾಂತಿ ಕಾಪಾಡಲು ಕೋರಿದರು.
ಪಿಎಸ್ಐ ಲಿಂಗನಗೌಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.