ಚಿತ್ರದುರ್ಗ: ಜಿಲ್ಲಾ ಹಾಪ್ಕಾಮ್ಸ, ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ನಗರದಲ್ಲಿ ಈರುಳ್ಳಿ ಬೆಳೆಯ ಆಧುನಿಕ ಬೇಸಾಯ ಕ್ರಮಗಳು, ಕೊಯ್ಲೋತ್ತರ ನಿರ್ವಹಣೆ ಸಂಸ್ಕರಣೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಗತಿಶೀಲ ರೈತರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎಚ್. ಸೀತಾರಾಮರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು.
ಈರುಳ್ಳಿ ಬೆಳೆಯ ಆಧುನಿಕ ಬೇಸಾಯ ಕ್ರಮಗಳು ಮತ್ತು ಕೊಯ್ಲೋತ್ತರ ನಿರ್ವಹಣೆ ಕುರಿತು ಹಿರಿಯೂರು ತೋಟಗಾರಿಕೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಡಿ. ಸುರೇಶ್ ಎಕಬೋಟೆ ಮಾಹಿತಿ ನೀಡಿದರು. ಬೆಂಗಳೂರು ಜಿಕೆವಿಕೆ ಮಾರುಕಟ್ಟೆ ಮಾಹಿತಿ ವಿಭಾಗದ ಸಂಶೋಧನಾ ಸಹಾಯಕ ಡಾ.ಎಚ್.ಎಸ್. ಶ್ರೀಕಾಂತ್ ಈರುಳ್ಳಿ ಮಾರಾಟ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು.
ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಡಾ.ಎಸ್.ಎಂ. ಶಾಂತವೀರಯ್ಯ ಈರುಳ್ಳಿ ಬೀಜೋತ್ಪಾದನೆಯಲ್ಲಿ ಜೇನು ಸಾಕಾಣಿಕೆ ಕುರಿತು ಮಾತನಾಡಿದರು. ತೋಟಗಾರಿಕೆ ಇಲಾಖೆ ತಾಂತ್ರಿಕ ಸಹಾಯಕ ಡಾ.ಪಿ. ವಿಶ್ವನಾಥ್ ಈರುಳ್ಳಿ ಬೆಳೆಯಲ್ಲಿ ಜೈವಿಕ ಕೀಟನಾಶಕಗಳ ಬಳಕೆ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಹಾಪ್ಕಾಮ್ಸ ಅಧ್ಯಕ್ಷ ಡಾ.ಬಿ.ಟಿ. ಹನುಮಂತರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಲಾನಯನ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್. ಕೃಷ್ಣಮೂರ್ತಿ, ತೋಟಗಾರಿಕೆ ಉಪ ನಿರ್ದೇಶಕ ಡಾ.ಬಿ.ವಿ. ವಿಜಯಕುಮಾರ್ ಇತರರು ಹಾಜರಿದ್ದರು. ಡಾ.ಬಸವರಾಜ ಸೊಪ್ಪಿಮಠ ಸ್ವಾಗತಿಸಿದರು.