ಚಿತ್ರದುರ್ಗ: ಈರುಳ್ಳಿ ರಫ್ತು ಮಾಡಲು ಮುಕ್ತ ಪರವಾನಗಿ ನೀಡುವುದು ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್.ತಿಪ್ಪಾರೆಡ್ಡಿ ಪ್ರತಿಪಾದಿಸಿದರು.ಜಲಸಂವರ್ಧನೆ ಯೋಜನಾ ಸಂಘ ಹಾಗೂ ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟ ಸಂಯುಕ್ತವಾಗಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲೆಯ ಈರುಳ್ಳಿ ಬೆಳೆಯ ಮಾರುಕಟ್ಟೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈರುಳ್ಳಿ ರಫ್ತು ನೀತಿ ಹಿಂದೆ ರಾಜಕೀಯ ಹಿತಾಸಕ್ತಿಯೂ ಅಡಗಿದೆ. ಚುನಾವಣೆಯ್ಲ್ಲಲಿ ಈರುಳ್ಳಿ ಬೆಲೆ ವಿಷಯವಾಗಿ ರಾಜಕೀಯ ಪಕ್ಷಗಳು ಸೋಲು-ಗೆಲುವು ಕಂಡಿವೆ. ಈರುಳ್ಳಿ ರಫ್ತು ಮಾಡಲು ಹೇರಿರುವ ನಿಬಂಧನೆಗಳು ರೈತರಿಗೆ ಮಾರಕವಾಗಿವೆ.
ದೇಶದಲ್ಲಿ ಮುಂದಿನ ದಿನಗಳಲ್ಲಿ ಮೂರ್ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ನಿರ್ಬಂಧಗಳನ್ನು ಹಾಕಿ ಈರುಳ್ಳಿ ಉತ್ಪನ್ನವನ್ನು ಇಲ್ಲಿಯೇ ಉಳಿಸಿ, ಬೆಲೆ ತಗ್ಗಿಸುವ ಹುನ್ನಾರವಿದೆ. ಪರೋಕ್ಷವಾಗಿ ಮಾರುಕಟ್ಟೆ ಏಜೆನ್ಸಿಗಳಿಗೆ ಲಾಭವೂ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ರೈತರಿಗೆ ಉಂಟಾಗುತ್ತಿರುವ ನಷ್ಟ ತಪ್ಪಿಸುವ ನಿಟ್ಟಿನಲ್ಲಿ ಈರುಳ್ಳಿ ದಾಸ್ತಾನು ಮಾಡಲು ಜಿಲ್ಲೆಯಲ್ಲಿ ವ್ಯವಸ್ಥಿತವಾದ ಉಗ್ರಾಣಗಳನ್ನು ತೆರೆಯುವ ಅಗತ್ಯವಿದೆ ಎಂದರು.