ಶಿವಮೊಗ್ಗ: ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ಲೋಕಾಯುಕ್ತ ನ್ಯಾಯಾಲಯ ಗುರುವಾರ ತೀರ್ಪನ್ನು ಡಿ. 31ಕ್ಕೆ ಕಾಯ್ದಿರಿಸಿತು.
ಜಾಮೀನು ಮಂಜೂರು ಅರ್ಜಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ ವಕೀಲ ಹೇಮಂತ ಕುಮಾರ್ ಲೋಕಾಯುಕ್ತ ಪೊಲೀಸರ ಪರವಾಗಿ ವಾದ ಮಂಡಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಲೋಕಾಯುಕ್ತ ಎಸ್ಪಿ ಸ್ವಾಮಿ ಮತ್ತು ಡಿವೈಎಸ್ಪಿ ಪಿ.ಒ. ಶಿವಕುಮಾರ್ ಡಿ. 24ರಂದು ಈಶ್ವರಪ್ಪ ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ವಶಪಡಿಸಿಕೊಂಡ ವಸ್ತುಗಳು ಹಾಗೂ ದಾಖಲೆಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ವಕೀಲರಾದ ಅಶೋಕ್ಭಟ್ ಹಾಗೂ ಎ.ಎಂ. ಶ್ರೀಧರ್ ಮೂಲಕ ನ್ಯಾಯಾಲಯಕ್ಕೆ ಸಿಆರ್ಪಿಸಿ ಕಲಂ 438ರ ಅಡಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಡಿ. 18 ರಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಪುತ್ರ ಕೆ.ಇ. ಕಾಂತೇಶ್ ಹಾಗೂ ಸೊಸೆ ಆರ್. ಶಾಲಿನಿ ಸಲ್ಲಿಸಿದ್ದರು.
ವಕೀಲ ವಿನೋದ ಕುಮಾರ್ ಈ ಹಿಂದೆ ಈಶ್ವರಪ್ಪ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿ, ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಷೇಧ ಕಾಯ್ದೆ ಸೆಕ್ಷನ್ 13 (1), (ಡಿ) ಮತ್ತು (ಇ) ಹಾಗೂ ಐಪಿಸಿ ಸೆಕ್ಷನ್ 120 (ಬಿ), 420 ನಂತೆ ಖಾಸಗಿ ದೂರು ದಾಖಲಿಸಿದ್ದರು.